ಮೈಸೂರು: ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಸಿನಿಮಾದ ಚಿತ್ರೀಕರಣ ಇಂದಿನಿಂದ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪುತ್ರ ನಿಖಿಲ್ ಜತೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿ ಸಮೇತ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಇಂದಿನಿಂದ ಮೈಸೂರಿನಲ್ಲಿ ಪುತ್ರ ನಿಖಿಲ್ ಅಭಿನಯದ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಮೈಸೂರಿನಲ್ಲಿ 35 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಯಲಿದೆ. ಜಾಗ್ವಾರ್ ಚಿತ್ರರಂಗದಲ್ಲೇ ಹೊಸ ನಿರೀಕ್ಷೆ ಹುಟ್ಟಿಸಿದೆ. ರಾಜಕೀಯ ಬೇಡ ಅಂತಾ ನಾನೇ ಚಿತ್ರರಂಗದಲ್ಲಿ ಮುಂದುವರೆಸಿದ್ದೇನೆ ಎಂದರು.
ಸಿದ್ದು ಸರ್ಕಾರದಲ್ಲಿ ಹಣಕಾಸು ಸ್ಥಿತಿ ಸಂಪೂರ್ಣವಾಗಿ ಹಾಳಾಗಿದ್ದು, ಪೆಡಿಂಗ್ ಬಿಲ್ ಸಾಕಷ್ಟಿದೆ. ಈ ಬಾರಿ 19 ಕೋಟಿ ಸಾವಿರ ತೆರಿಗೆ ಕೊರತೆಯುಂಟಾಗಲಿದೆ. ನನ್ನ ಅವಧಿಯಲ್ಲಿ ಇಷ್ಟೊಂದು ಹಣಕಾಸಿನ ಸ್ಥಿತಿ ಕುಸಿತ ಕಂಡಿರಲಿಲ್ಲ. ಆಡಳಿತ ಪಕ್ಷದ ವಿಫಲತೆಯೇ ಇದಕ್ಕೆ ಕಾರಣವೆಂದರು.
ಲೋಕಾಯುಕ್ತ ಸಂಸ್ಥೆಯನ್ನೇ ಸರ್ಕಾರ ಹಂತ ಹಂತವಾಗಿ ಹಾಳು ಮಾಡುತ್ತಿವೆ. ಲೋಕಾಯುಕ್ತ ನೇಮಕ ವಿಚಾರದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳೆರಡು ಹುಡುಗಾಟಿಕೆ ಆಡುತ್ತಿವೆ. ಸಂವಿಧಾನ ಚೌಕಟ್ಟಿನಲ್ಲಿ ಲೋಕಾಯುಕ್ತ ನೇಮಕ ಸಮಸ್ಯೆಯನ್ನು ಬಗೆಹರಿಸಬೇಕು. ಅದನ್ನು ಬಿಟ್ಟು ನೇಮಕದಲ್ಲೇ ಹಲವು ವಿವಾದಗಳನ್ನು ಹುಟ್ಟಿಸುವ ಮೂಲಕ ಪಕ್ಷಗಳು ಗೊಂದಲ ಸೃಷ್ಟಿಸಿವೆ ಎಂದರು.