ಮೈಸೂರು: ಚುನಾವಣೆ ಹತ್ತಿರವಾಗುತ್ತಿದ್ದ ವೇಳೆಯೇ ಶಾಸಕ ಸಾ.ರಾ.ಮಹೇಶ್ ಅವರ ಪುತ್ರ ಮತ್ತು ಗೆಳೆಯರು ಸೇರಿ ಯುವಕನೊಬ್ಬನಿಗೆ ಥಳಿಸಿದ ವೀಡಿಯೋ ವೈರಲ್ ಆಗಿದ್ದು, ಇದು ಶಾಸಕ ಸಾ.ರಾ.ಮಹೇಶ್ ಅವರ ರಾಜಕೀಯ ಬದುಕಿಗೆ ಕಪ್ಪುಚುಕ್ಕೆಯಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಾಗಿದೆ.
ಕಳೆದ ಕೆಲವು ವರ್ಷಗಳಿಂದ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕನಾಗಿ ಆರಿಸಿ ಬರುತ್ತಿರುವ ಸಾ.ರಾ.ಮಹೇಶ್ ಅವರು ಸೋಲಿಲ್ಲದ ಸರದಾರ ಎಂದರೂ ತಪ್ಪಾಗಲಾರದು. ಕ್ಷೇತ್ರದಲ್ಲಿ ಜನರ ನಾಡಿಮಿಡಿತವನ್ನು ಅರಿತಿದ್ದು, ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ಜನಕ್ಕೆ ಹತ್ತಿರವಾಗಿದ್ದರು. ವಿವಾಹ, ಹಬ್ಬ, ಸಾವು ಹೀಗೆ ಎಲ್ಲ ಸಂದರ್ಭಗಳಲ್ಲೂ ಸಹಾಯಧನ ನೀಡುತ್ತಾ ಬಂದಿದ್ದಾರೆ.
ಇನ್ನೊಂದೆಡೆ ಆಂಬ್ಯುಲೆನ್ಸ್ ಸೇವೆಯನ್ನೂ ಒದಗಿಸಿದ್ದಾರೆ. ದೇವಸ್ಥಾನ, ಮಸೀದಿ, ಚರ್ಚೆಗಳಿಗೂ ಸಹಾಯ ಮಾಡುವ ಮೂಲಕ ಎಲ್ಲ ವರ್ಗದ ಜನರನ್ನು ತನ್ನೆಡೆಗೆ ಸೆಳೆದುಕೊಂಡಿದ್ದಾರೆ. ಆದರೆ ಇದೀಗ ಮಗನ ಪೌರುಷದ ವೀಡಿಯೋ ಎಲ್ಲ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಆತನ ಗೂಂಡಾ ವರ್ತನೆ ನೋಡಿದ ಮಂದಿ ಈಗ ಶಾಸಕರನ್ನು ಸಂಶಯದ ದೃಷ್ಠಿಯಿಂದ ನೋಡುವಂತಾಗಿದೆ.
ಈ ಬಗ್ಗೆ ಮಾತನಾಡಿದ ಅವರು, ತಮ್ಮ ಮಗನ ಎರಡು ವರ್ಷದ ಘಟನೆಯನ್ನು ದೊಡ್ಡತಪ್ಪು ನಡೆದಿದೆ ಎಂದು ಬಿಂಬಿಸಲಾಗಿದೆ, ಆದರೆ ವಸ್ತು ಸ್ಥಿತಿ ಬೇರೆ ಇದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ವೀಡಿಯೋ ವೈರಲ್ ಆಗಿರುವುದು ಮನಸ್ಸಿಗೆ ನೋವುಂಟು ಮಾಡಿದೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಮಾಧ್ಯಮ ಮುಂದೆ ಕಣ್ಣೀರಿಟ್ಟಿದ್ದಾರೆ. ಇಷ್ಟಕ್ಕೂ ಈ ವೀಡಿಯೋ ಬಿಡುಗಡೆಯ ಹಿಂದೆ ರಾಜಕೀಯ ಕೈವಾಡ ಇದೆಯಾ ಎಂಬ ಸಂಶಯವೂ ಕಾಡತೊಡಗಿದೆ.
ಈ ವೀಡಿಯೋ ಮುಂದಿನ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ