ಮೈಸೂರು: ನನಗೆ ರಾಜಕೀಯಕ್ಕಿಂತ ಹೆಚ್ಚಾಗಿ ಸಿನಿಮಾದಲ್ಲಿ ತೊಡಗಿಸಿಕೊಳ್ಳುವುದೇ ಇಷ್ಟ. ಸಿನಿಮಾ ರಂಗ ಹೆಚ್ಚು ನನಗೆ ಖುಷಿ ಕೊಡುತ್ತದೆ. 2018 ರ ಚುನಾವಣಾ ರಾಜಕೀಯದಲ್ಲಿ ನನ್ನನ್ನು ಜನ ತಿರಸ್ಕರಿಸಿದರೆ ನಾನು ಸಂಪೂರ್ಣವಾಗಿ ಸಿನಿಮಾರಂಗದಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದು ಎಚ್ ಡಿ ಕುಮಾರಸ್ವಾಮಿ ಹೊಸಬಾಂಬ್ ಸಿಡಿಸಿದ್ದಾರೆ.
ಬಹು ನಿರೀಕ್ಷಿತ ನಿಖಿಲ್ ಅವರ ಜಗ್ವಾರ್ ಸಿನಿಮಾದ ಮೈಸೂರಿನ ಭಾಗದ ಚಿತ್ರೀಕರಣ ಮುಕ್ತಾಯದ ಕೊನೆಯ ದಿನವಾದ ಇಂದು ಸುದ್ದಿಗೋಷ್ಟಿ ನಡೆಸಿದ ಮಾತನಾಡಿದ ಅವರು, ಜಾಗ್ವಾರ್ ಚಿತ್ರದ ನಿರ್ಮಾಪಕರಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ ಶೇ. 45 ರಷ್ಟು ಭಾಗದ ಚಿತ್ರೀಕರಣವನ್ನು ಮೈಸೂರಿನಲ್ಲಿ ನಡೆಸಿದ್ದೇವೆ. ಕಳೆದ ಮೂರು ದಿನಗಳಿಂದ ತೆಲುಗಿನ ಖಳನಾಯಕರಾದ ಜಗಪತಿಬಾಬು, ಸಂಪತ್ ಹಾಗೂ ಆದಿತ್ಯರವರೊಟ್ಟಿಗಿ ಸಂಭಾಷಣೆಯ ಭಾಗ ಚೆನ್ನಾಗಿ ಮೂಡಿ ಬಂದಿದೆ ಎಂದರು.
ರಾಜಕೀಯ ಒತ್ತಡದ ನಡುವೆಯೂ ಮೈಸೂರಿಗೆ ಬಂದ ಮಗನ ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. ಸೂರ್ಯವಂಶ ನನ್ನನ್ನು ಜನರಿಗೆ ಪರಿಚಯಿಸಿತು. ಅಂತೆಯೇ ನನಗೆ ಹೆಚ್ಚಾಗಿ ಸಿನಿಮಾರಂಗದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಇಷ್ಟವಾಗಿದೆ. ಹಾಗಂದ ಮಾತ್ರಕ್ಕೆ ರಾಜಕೀಯ ಬೇಸರ ತರಿಸಿದೆ ಎಂದೆನೂ ಅಲ್ಲ ಜನರ ನನಗೆ ರಾಜಕೀಯವಾಗಿ ಎಲ್ಲವನ್ನೂ ನೀಡಿದ್ದಾರೆ. 20 ತಿಂಗಳ ನನ್ನ ಅವಧಿಯಲ್ಲಿ 20 ವರ್ಷಗಳಿಂದ ಯಾವ ರಾಜಕಾರಣಿಯೂ ಮಾಡದನ್ನು ನಾನೂ ಜನರಿಗೆ ಮಾಡಿರುವುದನ್ನು ಜನರು ಮರೆತಿಲ್ಲವೆಂದರು.
ಸದ್ಯಕ್ಕೆ ಜಾಗ್ವಾರ್ ಸಿನಿಮಾವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರೀಕರಣ ನಡೆದಿದ್ದು ತಮಿಳು ಭಾಷೆಗೂ ಚಿತ್ರವನ್ನು ಡಬ್ ಮಾಡುವ ಇಂಗಿತ ವ್ಯಕ್ತಪಡಿಸಿದ ಹೆಚ್.ಡಿ. ಕುಮಾರಸ್ವಾಮಿ ದಸರಾ ವೇಳೆಗೆ ಚಿತ್ರ ತೆರೆ ಕಾಣಲಿದೆ. ತೆಲುಗಿನ ಬಾಹುಬಲಿ ಚಿತ್ರಕ್ಕೆ ಜಾಗ್ವಾರ್ ಚಿತ್ರವನ್ನು ಹೋಲಿಸಬೇಡಿ ಆದರೆ ಮುಂದೊಂದು ದಿನ ನಿಖಿಲ್ನಿಂದಲೇ ಬಾಹುಬಲಿ ಅಂತಹ ಸಿನಿಮಾ ಕೊಡುವ ಆಸೆ ನನಗಿದೆ ಎಂದು ತಿಳಿಸಿದರು.