ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಸಾರದಲ್ಲಿ ಮತ್ತೆ ಬಿರುಗಾಳಿ ಎದ್ದಿದ್ದು, ನನ್ನ ಪತಿ ದರ್ಶನ್ ಗಲಾಟೆ ಮಾಡುತ್ತಾರೆ ಅವರಿಗೆ ಬುದ್ದಿವಾದ ಹೇಳಿ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪತ್ನಿಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ದರ್ಶನ್ ಗಂಭೀರ ಪ್ರತ್ಯಾರೋಪ ಮಾಡಿದ್ದಾರೆ. ಪತ್ನಿಗೆ ಪ್ರಿಯಕರನಿದ್ದು, ಆಕೆ ಆತನಿಗೆ ತಮ್ಮಿಂದ ಕದ್ದ ಆಡಿ ಕಾರನ್ನು ಕೊಟ್ಟಿದ್ದಾರೆ. ಇದನ್ನು ಕೇಳಲು ತಾವು ಹೋಗಿದ್ದುದಾಗಿ ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಇದೆಲ್ಲದರ ನಡುವೆ, ಇತ್ತೀಚೆಗೆ ಖಾಸಗಿ ವಾಹಿನಿಯೊಂದರಲ್ಲಿ ನಡೆದ ಕಾರ್ಯಕ್ರಮಕ್ಕೆ ಬರುವಂತೆ ಹೇಳಿದ್ದರೂ ಪತ್ನಿ ಬಾರದ ಕಾರಣಕ್ಕೆ ದರ್ಶನ್ ಆಕೆ ಮೇಲೆ ಕೋಪಗೊಂಡಿದ್ದರು ಎಂಬ ಸುದ್ದಿ ಹರಿದಾಡಿದೆ. ಆದರೆ, ಇದೆಲ್ಲದರ ಬಗ್ಗೆ ವಿಜಯಲಕ್ಷ್ಮಿ ಅವರು ಇನ್ನೂ ಮಾಧ್ಯಮಗಳ ಮುಂದೆ ಬಂದು ಪ್ರತಿಕ್ರಿಯೆ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪತ್ನಿ ನೀಡಿದ ದೂರಿನ ಅನ್ವಯ ಪೊಲೀಸರು ಗುರುವಾರ ದರ್ಶನ್ ಅವರನ್ನು ಕರೆಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. 2011ರ ಸೆಪ್ಟೆಂಬರ್ ನಲ್ಲಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಿಜಯಲಕ್ಷ್ಮೀ ಅವರು, ನನ್ನ ಪತಿ ಹಲ್ಲೆ ನಡೆಸಿ, ರಿವಾಲ್ವರ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದರು ಎಂದು ದೂರು ಕೊಟ್ಟಿದ್ದರು. ಆಗ ಕೊಲೆ ಯತ್ನ ಆರೋಪದಡಿ ದರ್ಶನ್ ಅವರನ್ನು ಬಂಧಿಸಿದ್ದ ಪೊಲೀಸರು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಒಂದು ತಿಂಗಳು ಜೈಲಿನಲ್ಲಿದ್ದ ದರ್ಶನ್, ಜಾಮೀನು ಪಡೆದು ಬಿಡುಗಡೆಯಾಗಿದ್ದರು.