ಮೈಸೂರು: ಇಲ್ಲಿಗೆ ಸಮೀಪದ ನಂಜನಗೂಡು ತಾಲೂಕಿನಲ್ಲಿ ಪೌಲ್ಟ್ರಿ ನಡೆಸುವ ನೆಪದಲ್ಲಿ ವಿವಿಧೆಡೆ ಹಣ ವಸೂಲಿ ಮಾಡಿಕೊಂಡು ನಾಪತ್ತೆಯಾಗಿದ್ದ ಅಂತರರಾಜ್ಯ ವಂಚನಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೇರಳದ ತಿರುವನಂತಪುರಂ ಸಮೀಪದ ನೆಯ್ಯಂಟಿಕರ ನಗರದ ಪ್ರಮೋದ್ (60) ಎಂದು ಗುರುತಿಸಲಾಗಿದೆ. ಈತನು 2016 ರಲ್ಲಿ ಒಮೇಗಾ 36 ಪೌಲ್ಟ್ರಿ ಟೆಕ್ನಾಲಜಿ ಫಾರಂ ಹೆಸರಿನಲ್ಲಿ ಇಲ್ಲಿನ ದೇವೀರಮ್ಮನಹಳ್ಳಿ ಬಡಾವಣೆಯಲ್ಲಿ ಕಚೇರಿಯನ್ನು ತೆರೆದು, ಒಂದೇ ವರ್ಷದಲ್ಲಿ ರೈತರ ಹಣವನ್ನು ದುಪಟ್ಟು ಮಾಡಿಕೊಡುವುದಾಗಿ ಆಸೆ ಹುಟ್ಟಿಸಿದ್ದ. ಉತ್ತಮ ತಳಿಯ ಕೋಳಿ ಮರಿಯೊಂದಕ್ಕೆ ತಲಾ 1200 ರೂಪಾಯಿಗಳಂತೆ ಮಾರಾಟ ಮಾಡುತಿದ್ದ. ರೈತರಿಂದ ತಲಾ 1.25 ಲಕ್ಷ ರೂ. ಪಡೆದುಕೊಂಡು ನೂರು ಕೋಳಿ ಮರಿಗಳನ್ನು ಸಾಕಲು ನೀಡುತ್ತಿದ್ದ. ಅವುಗಳ ಮೊಟ್ಟೆಯನ್ನು ತಾನೇ ತಲಾ 5 ರೂ.ಗಳಂತೆ ಕೊಂಡುಕೊಳ್ಳುತ್ತಿದ್ದ. ಕೆಲ ಸಮಯ ಹೀಗೆ ಜನರ ಬಳಿ ವ್ಯವಹಾರ ನಡೆಸಿ, ನಂಬಿಕೆಯನ್ನು ಹುಟ್ಟಿಸಿದ್ದಲ್ಲದೇ ಕೋಳಿ ಮರಿಗಳನ್ನು ನೀಡುವುದಾಗಿ ಹೇಳಿ ಹಲವರಿಂದ ಹಣ ವಸೂಲಿ ಮಾಡಿದ್ದ ಎನ್ನಲಾಗಿದೆ.
ಕೆಲ ಸಮಯದ ನಂತರ ಮೊಟ್ಟೆಗಳಿಗೆ ಬೇಡಿಕೆ ಕಡಿಮೆ ಆಯ್ತು ಎಂದು ಹೇಳಿ ಇದ್ದಕ್ಕಿದ್ದಂತೆ ಕಚೇರಿಯನ್ನು ಬಂದ್ ಮಾಡಿ ಪ್ರಮೋದ್ ನಾಪತ್ತೆಯಾಗಿದ್ದ. ಇದರಿಂದ ಕಂಗಾಲಾದ ಹಣ ನೀಡಿದವರಲ್ಲಿ ಕಡಕೊಳದ ಕಾಳಯ್ಯ, ಸಂಪತ್ ಸೇರಿದಂತೆ ನಾಲ್ಕೈದು ಮಂದಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಕಳೆದ ವರ್ಷವೇ ದೂರು ನೀಡಿದ್ದರು. ನಂತರ ಪೊಲೀಸ್ ತನಿಖೆಯಲ್ಲಿ ಆರೋಪಿಯು ನೆಟ್ಟಿಂಕರದಲ್ಲಿ ಇರುವುದನ್ನು ಪತ್ತೆ ಮಾಡಿ 680 ಕಿಲೋಮೀಟರ್ ದೂರ ಕ್ರಮಿಸಿ ಆರೋಪಿಯನ್ನು ಬಂಧಿಸಿ ಸೋಮವಾರ ನಂಜನಗೂಡು ಜೆಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಮೈಸೂರು ಜಿಲ್ಲಾ ಎಸ್ಪಿ ಸಿ ಬಿ ರಿಷ್ಯಂತ್ ಅವರು ಈತನ ವಿರುದ್ದ ಮೈಸೂರು ಜಿಲ್ಲೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದು ಕೆ ಆರ್ ಪೇಟೆ , ಸಾಲಿಗ್ರಾಮ ಮತ್ತು ನಂಜನಗೂಡಿನಲ್ಲಿ ಮೊಕದ್ದಮೆಗಳಿದ್ದು ಪೊಲೀಸರು ತನಿಖೆ ನಡೆಸುತಿದ್ದಾರೆ ಎಂದರು. ಈತನ ವಿರುದ್ದ ರಾಜ್ಯದಲ್ಲಿ ಒಟ್ಟು 28 ವಂಚನೆ ಪ್ರಕರಣಗಳು ದಾಖಲಾಗಿದ್ದು ಮೈಸೂರು, ಮಂಡ್ಯ, ಹಾಸನ, ಕೊಡಗು ಮುಂತಾದ ಕಡೆಗಳಲ್ಲೂ ಜನರಿಗೆ ವಂಚನೆ ಮಾಡಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ತಿಳಿಸಿದರು.
ನೆಯ್ಯಂಟ್ಟಿಕರದಲ್ಲಿ ದೊಡ್ಡ ಮನೆ ಹೊಂದಿದ್ದು 5-6 ನಾಯಿಗಳನ್ನೂ ಸಾಕಿಕೊಂಡಿರುವ ಈತ ಸ್ಥಳಿಯವಾಗಿ ಪ್ರಭಾವಿಯೇ ಆಗಿದ್ದಾನೆ. ಈತನ ಓರ್ವ ತಂಗಿ ಲಾಯರ್ ಮತ್ತೋರ್ವ ತಂಗಿ ನೆಯ್ಯಂಟ್ಟಿಕರ ನಗರ ಸಭೆಯ ಸದಸ್ಯೆ ಆಗಿದ್ದು ಸ್ಥಳೀಯ ಪೊಲೀಸರೂ ಈತನಿಗೆ ಬೆಂಬಲವಾಗಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಈತನನ್ನು ಬಂಧಿಸಲು ಎರಡು ಬಾರಿ ಪೊಲೀಸರು ಅಲ್ಲಿಗೆ ತೆರಳಿದ್ದರೂ ಬಂಧನ ಸಾದ್ಯವಾಗಿರಲಿಲ್ಲ. ಅಲ್ಲಿನ ಪೊಲೀಸರು ಮೊದಲಿಗೆ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಒತ್ತಡ ಹೇರುತಿದ್ದರು. ಅಲ್ಲದೆ ತನ್ನ ವಿರುದ್ದ ದೂರು ನೀಡಿರುವ ನಂಜನಗೂಡಿನ ರೈತರೊಬ್ಬರ ಮೇಲೆಯೇ ಈತ ಅಲ್ಲಿನ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆಯನ್ನೂ ಹೂಡಿ ಅವರು ಕೋರ್ಟಿಗೆ ಅಲೆಯುವಂತೆ ಮಾಡಿದ್ದಾನೆ. ಇದರಿಂದಾಗಿ ಹಣ ಕಳೆದುಕೊಂಡ ರೈತರು ಈತನ ವಿರುದ್ದ ದೂರು ನೀಡುವ ಧೈರ್ಯ ಮಾಡುವುದಿಲ್ಲ ಎನ್ನಲಾಗಿದೆ. ಈತನು ಕೇರಳ, ತಮಿಳುನಾಡು, ಆಂಧ್ರದಲ್ಲೂ ರೈತರಿಗೆ ಭರವಸೆ ನೀಡಿ ಹಣ ಸಂಗ್ರಹ ಮಾಡಿ ವಂಚಿಸಿದ್ದಾನೆ ಎನ್ನಲಾಗಿದೆ. ಈತನಿಂದ ವಂಚನೆಗೊಳಗಾದವರು ಇದ್ದರೆ ಪೊಲೀಸರಿಗೆ ದೂರು ನೀಡಬೇಕೆಂದು ಪೊಲೀಸರು ತಿಳಿಸಿದ್ದಾರೆ.