ಮೈಸೂರು: ಆರ್ ಎಸ್ ಎಸ್ ಕಾರ್ಯಕರ್ತ ಮಾಗಳಿ ರವಿ ಅವರನ್ನು ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಅದು ಅಪಘಾತವಲ್ಲ ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಆರೋಪ ಮಾಡಿದ್ದಾರೆ.
ಈ ಸಂಬಂಧ ಪ್ರಕರಣದ ಸತ್ಯಾಸತ್ಯತೆ ಹೊರತರುವಂತೆ ಪೊಲೀಸರು ಹಾಗೂ ಸರ್ಕಾರದ ಮೇಲೆ ಒತ್ತಡ ತರಲು ನವೆಂಬರ್ 7ರಂದು ಜಿಲ್ಲೆಯ ಪಿರಿಯಾಪಟ್ಟಣ, ಕೆ.ಆರ್.ನಗರ, ಹುಣಸೂರು ಮತ್ತು ಎಚ್.ಡಿ. ಕೋಟೆ ಬಂದ್ ಗೆ ಬಿಜೆಪಿ ಕರೆ ಕೊಡಲಾಗಿದೆ ಎಂದ ಸಂಸದರು ರವಿ ಅವರದ್ದು ಕೊಲೆ ಅನ್ನುವುದಕ್ಕೆ ಬಲವಾದ ಕಾರಣಗಳು ಲಭ್ಯವಾಗಿವೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೂ ಸಹ ಯಾವುದೋ ಬಲವಾದ ಆಯುಧದಿಂದ ತಲೆಗೆ ಹೊಡೆದ ನಂತರವೇ ಬೈಕ್ ನಿಂದ ಕೆಳಕ್ಕೆ ಬಿದ್ದಿರಬೇಕೆಂದು ಹೇಳಿದ್ದಾರೆ. ಈಗ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸುತ್ತೇವೆ.
ಆದರೆ ಪೊಲೀಸರಿಂದ ನಮಗೆ ಸರಿಯಾದ ಭರವಸೆ ಸಿಗಬೇಕು. ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸರು ಇದೊಂದು ಅಪಘಾತ ಅಂತಾ ಹೇಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವು ಕೋಮು ಶಕ್ತಿಗಳಿಗೆ ಬಿಜೆಪಿ ಮುಖಂಡರೇ ಟಾರ್ಗೆಟ್ ಆಗುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಮುಖಂಡನ 11ನೇ ಹತ್ಯೆ ಇದಾಗಿದೆ. ಕೇರಳದಲ್ಲಿ ತಮ್ಮ ರಾಜಕೀಯ ವೈರಿಗಳನ್ನು ಮುಗಿಸುವಂತಹ ದ್ವೇಷದ ರಾಜಕಾರಣ ಕರ್ನಾಟಕಕ್ಕೂ ಕಾಲಿಟ್ಟಿದೆ.
ಘಟನೆ ಹಿಂದೆ ಪಿಎಫ್ಐ, ಎಸ್ಡಿಪಿಐನಂತಹ ಮತೀಯ ಶಕ್ತಿಯ ಕೈವಾಡ ಇರುವುದನ್ನು ಅಲ್ಲಗೆಳೆಯಲಾಗದು. ಸರ್ಕಾರಕ್ಕೆ ನಾನು ಕೊಡುವ ಎಚ್ಚರಿಕೆ ಏನೆಂದರೆ, ಟಿಪ್ಪು ಬಗ್ಗೆ ಧಾರಾವಾಹಿ ಮಾಡಲು ಹೊರಟ ನಿರ್ದೇಶಕ ಸಂಜಯ್ ಖಾನ್ 80 ಜನರ ಸಜೀವ ದಹನಕ್ಕೆ ಕಾರಣರಾದರು, ತಾವೂ ಬೆಂಕಿಯಲ್ಲಿ ಬೆಂದರು. ಅದೇ ರೀತಿ ಲಂಡನ್ ನಿಂದ ಟಿಪ್ಪು ಖಡ್ಗ ಖರೀದಿಸಿ ತಂದ ವಿಜಯ್ ಮಲ್ಯ ಬರ್ಬಾದ್ ಆಗಿದ್ದಾರೆ. ಇನ್ನು ಟಿಪ್ಪು ಜಯಂತಿ ಆಚರಿಸುತ್ತಿರುವ ಈ ಸರ್ಕಾರದ ಕಥೆ ಏನಾಗುತ್ತದೆ ಅನ್ನುವುದನ್ನು ಕಾದುನೋಡುತ್ತೇವೆ ಎಂದರು.