ಮೈಸೂರು: ತಮ್ಮ ಸಹಜ ಸಾಹಿತ್ಯದ ಮೂಲಕ ನಾಡು ನುಡಿ ಪರಿಸರ ವಿಚಾರದಲ್ಲಿ ಹೊಸ ವಿಚಾರಕ್ರಾಂತಿಯನ್ನೇ ಮೂಡಿಸಿ ಲಕ್ಷಾಂತರ ಯುವಕರನ್ನು ತನ್ನೆಡೆಗೆ ಸೆಳೆದ ಮೂಡಿಗೆರೆಯ ಮಾಯಾವಿ ಅತ್ಯದ್ಭುತ ಬರಹಗಾರ ಕೆ.ಪಿ.ಪೂರ್ಣಚಂದ್ರತೇಜಸ್ವಿ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ವೈ.ಡಿ.ರಾಜಣ್ಣ ಹೇಳಿದರು.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನ್ಮಜಯಂತಿ ಅಂಗವಾಗಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಪುರ ವೃತ್ತದಲ್ಲಿರುವ ತಗಡೂರು ರಾಮಚಂದ್ರ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ತೇಜಸ್ವಿ ಹೊಸ ತಲೆಮಾರಿನ ಯುವ ಸಮೂಹದಲ್ಲೂ ಪರಿಸರ, ಸಾಹಿತ್ಯ, ವೈಚಾರಿಕ ವಿಚಾರಗಳ ಕುರಿತಂತೆ ಕುತೂಹಲ ಕೆರಳಿಸಿದವರು. ಸಾಹಿತ್ಯ 60 ವರ್ಷ ಮೇಲ್ಪಟ್ಟವರಿಗೆ ಎಂಬುದನ್ನು ಹೋಗಲಾಡಿಸಿದವರು. ಈಗಿನ ಕವಿಗಳು ಹಾಗೂ ಸಾಹಿತಿಗಳು ತಮ್ಮ ಕಾದಂಬರಿಗಳಲ್ಲಿ ಪ್ರಸ್ತಾಪಿಸಿರುವ ಪರಿಸರದ ಕಾಳಜಿ, ಪ್ರಶ್ನಾ ಮನೋ ಭಾವವನ್ನು ಹಲವು ದಶಕಗಳ ಹಿಂದೆಯೇ ತೇಜಸ್ವಿ ಕನ್ನಡ ಸಾಹಿತ್ಯದಲ್ಲಿ ತಮ್ಮ ಕೃತಿಗಳ ಮೂಲಕ ಪ್ರತಿಪಾದಿಸಿದ್ದಾರೆ. ಇಬ್ಬರ ಕೃತಿಗಳನ್ನು ಓದಿದವರಿಗೆ ಇದು ಅರಿವಾಗಲಿದೆ ಎಂದು ಹೇಳಿದರು.
ಆಧುನಿಕ ಸಾಹಿತ್ಯದ ನವ್ಯದ ಜತೆ ದೊಡ್ಡ ಪ್ರಯೋಗ ನಡೆಸಿದವರು ತೇಜಸ್ವಿ. ಕಥೆಗಳನ್ನೇ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಒಳಪಡಿಸಿದವರು. ಎಲ್ಲಾ ಪ್ರಕಾರದ ಕತೆಗಳನ್ನು ಕಾದಂಬರಿಗೆ ಬಳಸಿದವರು. ಬಹುಮುಖಿ ಕಥನ ತಂದವರು. ಚಿಕ್ಕದಾಗಿ, ಸರಳವಾಗಿ ಓದುಗರ ಮನಮುಟ್ಟುವಂತೆ ಸಾಹಿತ್ಯ ರೂಪಿಸಿದವರು. ಪ್ರಕೃತಿಗೆ ಹೊಸ ಭಾಷ್ಯ ಕೊಟ್ಟವರು ಕುವೆಂಪು. ಇದನ್ನು ಚಿಕಿತ್ಸಕ ಬುದ್ಧಿಯಿಂದ ಪರಾಮರ್ಶಿಸಿ ಪರಿಸರದೊಳಗೆ ಹೊಕ್ಕು ಬರೆದವರು ತೇಜಸ್ವಿ ಎಂದರು.
ಇದೇ ಸಂದರ್ಭದಲ್ಲಿ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ಬಸವರಾಜ ಬಸಪ್ಪ, ವಿನಯ್ ಕಣಗಾಲ್, ರವಿತೇಜ, ಸುಚೀಂದ್ರ, ಚಕ್ರಪಾಣಿ, ಪ್ರಶಾಂತ್ ಭಾರದ್ವಾಜ್ ಹಾಗೂ ಇನ್ನಿತರರು ಇದ್ದರು.