ಕೃಷ್ಣರಾಜಪೇಟೆ: ಬೈಕ್ನ ಲೈಟ್ ಡೂಮ್ನಲ್ಲಿ ಅವಿತಿದ್ದ ಬಲ್ಲೂರಿ ಹಾವನ್ನು ಉರಗತಜ್ಞ ಸ್ನೇಕ್ ಮುನ್ನಾ ಅವರು ರಕ್ಷಣೆ ಮಾಡಿದ್ದಾರೆ.
ರಫಿ ಅವರು ತಮ್ಮ ಹೀರೋ ಹೋಂಡಾ ಸ್ಪೆಂಡರ್ ಮೋಟಾರ್ ಬೈಕಿನಲ್ಲಿ ಚಿಕನ್ ಖರೀದಿಸಲು ಬಂದಿದ್ದ ವೇಳೆ ಅವರ ಮೋಟಾರ್ ಬೈಕಿನ ಮೇಲೆ ಹಾವು ಹರಿದಾಡುತ್ತಿದ್ದುದನ್ನು ಗಮನಿಸಿದ ಸೈಫ್ ಚಿಕನ್ ಸೆಂಟರ್ ಮಾಲೀಕ ರಿಯಾಜ್ ಅಹಮದ್ ಅವರು, ಉರಗ ತಜ್ಞ ಸ್ನೇಕ್ ಮುನ್ನಾ ಅವರಿಗೆ ಕರೆ ಮಾಡಿ ಹಾವನ್ನು ಹಿಡಿಯುವಂತೆ ಮನವಿ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಮುನ್ನಾ ಅಪರೂಪದ ಮಾರುದ್ದದ ಬಲ್ಲೂರಿ ಹಾವನ್ನು ಚಾಕಚಕ್ಯತೆಯಿಂದ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಉರಗತಜ್ಞರಾಗಿ ಕಳೆದ ಹತ್ತಾರು ವರ್ಷಗಳಿಂದ ಹಾವುಗಳನ್ನು ಹಿಡಿದು ಸಂರಕ್ಷಣೆ ಮಾಡುವ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿರುವ ಸ್ನೇಕ್ ಮುನ್ನಾ ಅವರು ಇದುವರೆಗೆ ಐದು ಸಾವಿರಕ್ಕೂ ಹೆಚ್ಚಿನ ವಿವಿಧ ಬಗೆಯ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಪರಿಸರ ಹಾಗೂ ರೈತರ ಮಿತ್ರನಾಗಿರುವ ಹಾವುಗಳನ್ನು ಕೊಲ್ಲದೆ, ಸಂರಕ್ಷಣೆ ಮಾಡಬೇಕು ಎಂದು ಮನವಿ ಮಾಡುವ ಮುನ್ನಾ ಪರಿಸರದ ಸಮತೋಲನದಲ್ಲಿ ಹಾವುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂಬ ಅಂಶವನ್ನು ತಿಳಿಸಿ ಹಾವುಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮುನ್ನ ಅವರು, ಹಲವಾರು ಬಾರಿ ವಿಷ ಸರ್ಪಗಳಿಂದ ಕಚ್ಚಿಸಿಕೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಬದುಕುಳಿದು ಬಂದಿದ್ದಾರೆ.
ಅರಣ್ಯ ಇಲಾಖೆ, ತಾಲೂಕು ಆಡಳಿತ ಸೇರಿದಂತೆ ಸರ್ಕಾರವು ಸ್ನೇಕ್ ಮುನ್ನಾ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಯಾವುದೇ ಸೌಕರ್ಯಗಳು ಹಾಗೂ ಸೌಲಭ್ಯಗಳನ್ನು ನೀಡದಿರುವುದು ಮಾತ್ರ ವಿಪರ್ಯಾಸದ ಸಂಗತಿಯಾಗಿದೆ. ಸ್ಥಳೀಯ ಪುರಸಭೆಯು ಹಾವುಗಳನ್ನು ಹಿಡಿಯಲು ಅಗತ್ಯವಾಗಿ ಬೇಕಾದ ಸುರಕ್ಷತಾ ಕಿಟ್ ಅನ್ನು ಕೊಡಿಸಿಕೊಡಬೇಕು. ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದರೂ ಪುರಸಭೆಯ ಆಡಳಿತ ಮಂಡಳಿಯು ತಮಗೆ ಯಾವುದೇ ಸಹಾಯ ಮಾಡಿಲ್ಲ ಎಂದು ಮುನ್ನಾ ಬೇಸರ ವ್ಯಕ್ತಪಡಿಸಿದ್ದಾರೆ.