ಮೈಸೂರು: ಮಳೆಗಾಲದ ಕೊನೆಯ ದಿನಗಳಲ್ಲೇ ನೀರಿನ ಬಗ್ಗೆ ಆತಂಕ ಶುರುವಾಗಿದೆ. ಈ ದಿನಗಳಲ್ಲಿ ತುಂಬಿ ಹರಿಯಬೇಕಾಗಿದ್ದ ಕಾವೇರಿ ಸೊರಗಿದ್ದಾಳೆ. ಇದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಕೃಷಿ ಮಾಡುವುದಿರಲಿ ಕುಡಿಯಲು ಹನಿ ನೀರಿಗೂ ಪರದಾಡುವ ಸ್ಥಿತಿಗೆ ಬಂದು ತಲುಪುವುದಂತು ಖಚಿತವಾಗುತ್ತಿದೆ.
ಕಾವೇರಿ ತವರು ಕೊಡಗಿನಲ್ಲೇ ನೀರು ನದಿ, ತೊರೆಗಳಲ್ಲಿ ಹರಿಯುತ್ತಿಲ್ಲ. ನೀರಿನಾಶ್ರಯವಿರುವ ಪ್ರದೇಶಗಳಲ್ಲಿ ಭೂಮಿಯಿಂದ ಉಕ್ಕಿ ಹರಿಯುತ್ತಾ, ಬಾವಿಗಳಲ್ಲಿ ನೀರು ತುಂಬಿಕೊಂಡಿರಬೇಕಿತ್ತಾದರೂ ಈ ಬಾರಿ ಅದು ಕಾಣುವುದು ಅಪರೂಪವಾಗಿದೆ. ಅಲ್ಲಿಯೂ ಕುಡಿಯುವ ನೀರಿಗೆ ಹಾಹಾಕಾರ ಏಳುವ ಪರಿಸ್ಥಿತಿಗೆ ಬಂದು ತಲುಪಿದೆ. ಮಳೆಯ ನೀರನ್ನೇ ನಂಬಿ ಭತ್ತದ ಕೃಷಿ ಮಾಡುತ್ತಿದ್ದ ಕೃಷಿಕರು ಕೆಲವು ಕಡೆ ನೀರಿನ ಕೊರತೆಯಿಂದಾಗಿ ಭತ್ತದ ನಾಟಿಯನ್ನೇ ನೆಟ್ಟಿಲ್ಲ.
ಕೊಡಗಿನಲ್ಲಿಯೇ ನದಿ, ತೊರೆಗಳು ತುಂಬಿ ಹರಿಯುತ್ತಿಲ್ಲ ಎಂದಾದ ಮೇಲೆ ಕೆಆರ್ ಎಸ್ ಗೆ ನೀರು ತಾನೆ ಹೇಗೆ ಹರಿದು ಬರಬೇಕು? ಕಾವೇರಿ ಕಣಿವೆಯಲ್ಲಿ ಎಷ್ಟೇ ಜೋರಾಗಿ ಮಳೆ ಸುರಿದರೂ ಕೆಆರ್ ಎಸ್ ನ ನೀರಿನ ಮಟ್ಟ ಹೆಚ್ಚುವ ಲಕ್ಷಣಗಳಂತು ಖಂಡಿತಾ ಇಲ್ಲ. ಹೀಗಿರುವಾಗ ಸುಪ್ರೀಂಕೋರ್ಟ್ ತೀರ್ಪಿನಂತೆ ತಮಿಳುನಾಡಿಗೆ ನೀರು ಹರಿಯುತ್ತಲೇ ಇದ್ದು ಸೆ.20ರವರೆಗೆ ಇದೇ ರೀತಿ ನೀರು ಹರಿದರೆ ಜಲಾಶಯ ಬರಿದಾಗಿ ಡೆಡ್ ಸ್ಟೋರೇಜ್ ಅನ್ನು ತಲುಪುವುದಂತು ಸತ್ಯ.
ನೀರು ಇದೇ ರೀತಿ ಹರಿಯುತ್ತಲೇ ಇದ್ದರೆ ಕೆಆರ್ ಎಸ್ ಜಲಾಶಯ ಸೇರಿದಂತೆ ಕಾವೇರಿ ಕಣಿವೆಯ ಎಲ್ಲ ಜಲಾಶಯಗಳು ಬತ್ತಿ ಹೋಗುವುದರಲ್ಲಿ ಎರಡು ಮಾತಿಲ್ಲ. ಈ ನಡುವೆ ಕೆಆರ್ ಎಸ್ ನಿಂದ ಕಾಲುವೆಗಳಿಗೆ ನೀರು ಹರಿಸುವ ಮೂಲಕ ರೈತರ ಕಣ್ಣೊರೆಸುವ ತಂತ್ರವನ್ನು ಸರ್ಕಾರ ಮಾಡುತ್ತಿದ್ದರೂ ಆ ನೀರನ್ನು ನಂಬಿ ಯಾವುದೇ ಬೆಳೆ ಬೆಳೆಯಲಾರದ ಸ್ಥಿತಿಗೆ ರೈತ ಬಂದು ತಲುಪಿದ್ದಾನೆ. ಜೂನ್ ತಿಂಗಳಲ್ಲೇ ನೀರು ಹರಿಸಿದ್ದರೆ ಇಷ್ಟರಲ್ಲೇ ಬೆಳೆಯನ್ನು ತೆಗೆಯಬಹುದಿತ್ತು. ಆಗ ಬೆಳೆಗೆ ನೀರು ಹರಿಸಲ್ಲ ಎಂದು ಹೇಳಿದ ಸರ್ಕಾರ ಬಳಿಕ ರೈತರ ಒತ್ತಡಕ್ಕೆ ಮಣಿದು ನೀರು ಹರಿಸಿತ್ತು. ನಂತರ ನಿಲ್ಲಿಸಿತ್ತು. ಇದೀಗ ನೀರು ಹರಿಯುತ್ತಿದೆಯಾದರೂ ಪ್ರಯೋಜನ ಅಷ್ಟರಲ್ಲೇ ಇದೆ.
ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯ ಮೂಲಗಳ ಪ್ರಕಾರ ಜಲಾಶಯದಲ್ಲಿ ಮಂಗಳವಾರ ಇದ್ದ `ಬಳಕೆಗೆ ಲಭ್ಯ ನೀರಿನ ಪ್ರಮಾಣ ಕೇವಲ 6.657 ಟಿಎಂಸಿ ಮಾತ್ರ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ ಬಳಕೆಗೆ ಲಭ್ಯ ನೀರಿನ ಪ್ರಮಾಣ 20.385 ಟಿಎಂಸಿ ಇತ್ತು.
ಕಳೆದ ವರ್ಷಕ್ಕೆ ಹೋಲಿಸಿದಾಗ ಸುಮಾರು 16 ಟಿಎಂಸಿಯಷ್ಟು ನೀರು ಕಡಿಮೆಯಾಗಿದೆ. ಕಳೆದ ಬಾರಿ 106.95 ಅಡಿಗಳಷ್ಟು ನೀರು ಕೆ.ಆರ್.ಎಸ್.ನಲ್ಲಿತ್ತು. ಸುಪ್ರೀಂ ತೀರ್ಪಿನಂತೆ ಸೆ.20ರ ವರೆಗೂ ನೀರು ಹರಿಸುವುದು ಅನಿವಾರ್ಯವಾಗಿರುವುದರಿಂದ ಕೆಆರ್ಎಸ್ ಜಲಾಶಯ ಮಳೆಗಾಲ ಕಳೆಯುವ ಮೊದಲೇ ಡೆಡ್ ಸ್ಟೋರೇಜ್ (74 ಅಡಿ) ತಲುಪುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿದೆ.
ಕೆಆರ್ ಎಸ್ ನ ನೀರನ್ನೇ ನಂಬಿರುವ ಅನ್ನದಾತರ ಬದುಕು ಮೂರಾಬಟ್ಟೆಯಾಗಿದೆ. ಕೃಷಿ ಹೊರತುಪಡಿಸಿ ಬೇರೆ ಕಾಯಕವೇ ಮಾಡಲಾಗದ ಸ್ಥಿತಿಯಲ್ಲಿರುವ ರೈತ ಮುಂದೇನು ಎಂಬ ಚಿಂತೆಯಲ್ಲಿದ್ದಾನೆ. ಅಷ್ಟೇ ಅಲ್ಲದೆ, ಕುಡಿಯಲು ಇದೇ ನೀರನ್ನು ನಂಬಿ ಬೆಂಗಳೂರು, ಮೈಸೂರು ಜನರೂ ಇದ್ದಾರೆ. ಮುಂದೆ ಏನೆಲ್ಲ ಆಗುತ್ತದೆ ಎಂಬುದನ್ನು ಕಾಲವೇ ಹೇಳಬೇಕಿದೆ.
ಬಹಳಷ್ಟು ವರ್ಷಗಳ ಹಿಂದೆಯೇ ತಜ್ಞರು ಮುಂದೊಂದು ದಿನ ನೀರಿಗಾಗಿ ಯುದ್ಧ ಮಾಡಬೇಕಾಗಬಹುದು ಎಂದು ಭವಿಷ್ಯ ನುಡಿದಿದ್ದರು. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಅದು ನಿಜವಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.