ಮೈಸೂರು: 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅತಿಥ್ಯ ವಹಿಸಿರುವ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭ್ರಷ್ಟರ ಬೀಡಾಗಿದ್ದು, ಲಕ್ಷಾಂತರ ಹಣ ದುರುಪಯೋಗ ನಡೆದಿರುವ ಕಾರಣ ಮೊದಲಿಗೆ ಭ್ರಷ್ಟಾಚಾರದ ತನಿಖೆ ನಡೆಸಿ ಬಳಿಕ ಸರ್ಕಾರ ಸಮ್ಮೇಳನ ನಡೆಸಲಿ ಎಂದು ಸಾಹಿತಿ ಬನ್ನೂರು ರಾಜು ಒತ್ತಾಯಿಸಿದ್ದಾರೆ.
83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ನಗರದಲ್ಲಿ ನಡೆಸಲು ನಿರ್ಧರಿಸಿರುವುದು ವಿಶೇಷವಾಗಿ ಮೈಸೂರಿಗರು ಹೆಮ್ಮೆಪಡುವ ವಿಷಯ. ಆದರೆ ಇದರ ಆತಿಥ್ಯ ವಹಿಸುತ್ತಿರುವ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭ್ರಷ್ಟರ ಬೀಡಾಗಿದ್ದು, ಲಕ್ಷಾಂತರ ಹಣ ದುರುಪಯೋಗವೂ ಸೇರಿದಂತೆ ಅನೇಕ ಅವ್ಯವಹಾರಗಳಲ್ಲಿ ತೊಡಗಿದೆ. ಹೀಗಾಗಿಯೇ ಕಳೆದ ಜುಲೈ ತಿಂಗಳಲ್ಲೇ ತರಾತುರಿಯಲ್ಲಿ ಸಮ್ಮೇಳನವನ್ನು ನಡೆಸಲು ಪರಿಷತ್ತು ಮುಂದಾದಾಗ ಪ್ರಜ್ಞಾವಂತ ನಾಗರಿಕರು, ಸಾಹಿತಿಗಳು, ಕನ್ನಡ ಸಂಘ ಸಂಸ್ಥೆಗಳು ಇದನ್ನು ವಿರೋಧಿಸಿ ಬೃಹತ್ ಸಭೆ ನಡೆಸಿ ಮೊದಲು ಪರಿಷತ್ತಿನ ಭ್ರಷ್ಟಾಚಾರದ ತನಿಖೆ ನಡೆಸಿ ಆನಂತರ ಸಮ್ಮೇಳನ ನಡೆಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿತ್ತು.
ಜೊತೆಗೆ ಸರ್ಕಾರಿ ನೌಕರರಾಗಿದ್ದು, ಪರಿಷತ್ತಿನ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಜಿಲ್ಲಾ ಕಸಪಾ ಅಧ್ಯಕ್ಷ ವೈ.ಡಿ.ರಾಜಣ್ಣ ಅವರನ್ನು ಅಮಾನತುಪಡಿಸಿ ಪರಿಷತ್ತಿಗೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕೆಂಬ ನಿರ್ಣಯವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಇದಕ್ಕೆ ಸ್ಪಂಧಿಸಿದ ಸರ್ಕಾರ ಕಳೆದ ಜುಲೈನಲ್ಲಿ ಪರಿಷತ್ತು ನಡೆಸಲು ಉದ್ದೇಶಿಸಿದ್ದ ಸಮ್ಮೇಳನವನ್ನು ರದ್ದುಪಡಿಸಿತ್ತು. ಸ್ವತಃ ಜಿಲ್ಲಾಧಿಕಾರಿಗಳೇ ಪರಿಷತ್ತಿನ ಅವ್ಯವಹಾರಗಳ ಬಗ್ಗೆ ಕ್ರಮ ಕೈಗೊಂಡು ಸೂಕ್ತ ತನಿಖೆ ನಡೆಸುವುದಾಗಿ ಹೇಳಿದ್ದರು.
ಆದರೆ ಈಗ ಇದ್ದಕ್ಕಿದ್ದಂತೆ ಕನಿಷ್ಟ ಒಂದು ಸಭೆಯನ್ನೂ ಮೈಸೂರಿನಲ್ಲಿ ಕರೆಯದೆ ಏಕಾಏಕಿ ನವೆಂಬರ್ 24, 25, 26ರಂದು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವುದಾಗಿ ಪರಿಷತ್ತು ಸ್ವಯಂ ಘೋಷಿಸಿಕೊಂಡಿದೆ. ಇದಕ್ಕೆ ಸಾರ್ವಜನಿಕರ, ಜನಪ್ರತಿನಿಧಿಗಳ, ಸಂಘ ಸಂಸ್ಥೆಗಳ, ಸಾಹಿತಿಗಳ, ಕಲಾವಿದರ ಸಹಕಾರ ಬೇಡವೇ? ಸರ್ಕಾರ ಮತ್ತು ಸಾರ್ವಜನಿಕರ ದುಡ್ಡು ಮಾತ್ರ ಬೇಕೇ? ಎಂದು ಅವರು ಪ್ರಶ್ನಿಸಿದ್ದಾರೆ.