ಮೈಸೂರು : ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕಸ್ಟಡಿಯಲ್ಲಿದ್ದ ಆರು ಮಂದಿ ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಚಾಮುಂಡಿಬೆಟ್ಟ ತಪ್ಪಲಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಹೆಚ್ಚಿನ ತನಿಖೆಗಾಗಿ ಕಸ್ಟಡಿಯಲ್ಲಿಟ್ಟು ಕೊಂಡಿದ್ದರು. ಆದರೆ ಬಂಧಿತ ಆರೋಪಿಗಳ ಪೊಲೀಸ್ ಕಸ್ಟಡಿಯ ಅವಧಿಯು ಮುಗಿದಿರುವ ಕಾರಣ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ.
ವಿದ್ಯಾರ್ಥಿನಿಯ ಸ್ನೇಹಿತನಿಗೆ ಹಲ್ಲೆ ಮಾಡಿ ಯುವತಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು. ಈ ಸಂಬಂಧ ಪೊಲೀಸರು ತನಿಖೆ ನಡೆಸಿ ಮೈಸೂರಿನ ಒಬ್ಬ ಮತ್ತು ತಮಿಳುನಾಡಿನ ಐವರನ್ನು ಬಂಧಿಸಿ ತರಲಾಗಿತ್ತು. ಈ ಪ್ರಕರಣದಲ್ಲಿ ಮತ್ತೊಬ್ಬ ಭಾಗಿಯಾಗಿರುವ ಮಾಹಿತಿ ಇರುವ ಹಿನ್ನಲೆಯಲ್ಲಿ ಆತನಿಗಾಗಿ ಹುಡುಕಾಟ ನಡೆದಿದೆ ಎನ್ನಲಾಗಿದೆ.
ಈ ನಡುವೆ ಆರೋಪಿಗಳನ್ನು ಬಂಧಿಸಿದ ಪೊಲೀಸರು ಹೆಚ್ಚಿನ ತನಿಖೆಗಾಗಿ ಹತ್ತು ದಿನಗಳ ಕಾಲ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದರು. ಈಗಾಗಲೇ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಈಗ ಕಸ್ಟಡಿಯ ಅವಧಿ ಮುಗಿದಿರುವ ಹಿನ್ನಲೆಯಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಇಂದು ನ್ಯಾಯಾಧೀಶರು ಬಹುಶಃ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಇದೆ.
ಚಾಮುಂಡಿಬೆಟ್ಟದಲ್ಲಿ ಏಕಾಂತ ಬಯಸಿ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, ಜನರಿಲ್ಲದ ಪ್ರದೇಶದಲ್ಲಿ ಕುಳಿತು ಯುವಕ ಯುವತಿಯರು ಮಾತನಾಡುತ್ತಿರುತ್ತಾರೆ. ಇದನ್ನೇ ಟಾರ್ಗೆಟ್ ಮಾಡಿಕೊಂಡು ಅವರನ್ನು ಬೆದರಿಸಿ ಹಣ ಮೊಬೈಲ್ ವೆಹಿಕಲ್ ಕಿತ್ತು ಪರಾರಿಯಾದ ಪ್ರಕರಣಗಳು ನಡೆದಿವೆ. ಆದರೆ ಪೊಲೀಸರಿಗೆ ದೂರು ನೀಡಿದರೆ ತಮಗೆ ತೊಂದರೆಯಾಗುತ್ತದೆ ಎಂಬ ಭಯದಲ್ಲಿ ಯಾರೂ ದೂರು ನೀಡುತ್ತಿರಲಿಲ್ಲ. ಹೀಗಾಗಿ ಇಂತಹ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇತ್ತು.
ಕೆಲವು ವರ್ಷಗಳ ಹಿಂದೆ ಕಾರಿನಲ್ಲಿ ಮಚ್ಚು ಲಾಂಗ್ ಇಟ್ಟು ಕೊಂಡು ಓಡಾಡುತ್ತಾ ಜೋಡಿಗಳನ್ನು ಹೆದರಿಸಿ ಅವರ ಮೇಲೆ ದೌರ್ಜನ್ಯ ಎಸಗುವುದಲ್ಲದೆ, ಅವರ ಬಳಿಯಿದ್ದ ಚಿನ್ನಾಭರಣ ಒಡವೆ ಹಣ ಕಿತ್ತುಕೊಳ್ಳುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದರು.
ಇಲ್ಲಿ ದೌರ್ಜನ್ಯಕ್ಕೊಳಗಾದವರು ಪೊಲೀಸರಿಗೆ ದೂರು ನೀಡದೆ ಇದ್ದುದರಿಂದ ದೌರ್ಜನ್ಯ ನಡೆಸಲು ದುಷ್ಕರ್ಮಿಗಳಿಗೆ ರಹದಾರಿ ಮಾಡಿಕೊಟ್ಟಿತ್ತು. ಇದೀಗ ಈ ವ್ಯಾಪ್ತಿಯಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಏಕಾಂತ ಬಯಸಿ ಯುವಕ ಯುವತಿಯರು ಇನ್ನಾದರೂ ನಿರ್ಜನ ಪ್ರದೇಶಕ್ಕೆ ತೆರಳುವುದನ್ನು ಬಿಟ್ಟು ಬಿಡಲಿ.