ಮೈಸೂರು: ಆನೆಗಳ ಕಾಟದಿಂದ ಬೇಸತ್ತ ಆದಿವಾಸಿ ಮಹಿಳೆಯೊಬ್ಬಳು ಕಳೆದ 2 ವರ್ಷಗಳಿಂದ ಮರದ ಮೇಲೆ ಮನೆ ವಾಸ ಮಾಡುತ್ತಿರುವ ಕರುಣಾಜನಕ ಘಟನೆ ಪಿರಿಯಾಪಟ್ಟಣ ತಾಲೂಕಿನ ದುಡ್ಡಹರವೆ ಮೀಸಲು ಅರಣ್ಯ ಪ್ರದೇಶದ ಕಾಡಂಚಿನ ಕರಡಿ ಬೊಕ್ಕೆ ಗಿರಿಜನ ಹಾಡಿಯಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ದೊಡ್ಡಹರವೇ ಮೀಸಲು ಅರಣ್ಯಕ್ಕೆ ಸೇರಿದ ಕಾಡಂಚಿನ ಗಿರಿಜನ ಹಾಡಿಯ ಕರಿಡಿಬೊಕ್ಕೆ ಬಳಿಯ ದಿ.ಗಣೇಶ ಎಂಬುವವರ ಪತ್ನಿ ಲತಾ ಎಂಬುವವರೇ ಕಳೆದ 2 ವರ್ಷಗಳಿಂದ ಮರದ ಮೇಲೆ ವಾಸ ಮಾಡುತ್ತಿರುವ ಗಿರಿಜನ ಹಾಡಿಯ ಮಹಿಳೆ. ಈ ಹಾಡಿಯಲ್ಲಿ ಕಾಡಿನ ಮಧ್ಯೆ ಮದ್ಯೆ ಸುಮಾರು 22 ಕುಟುಂಬಗಳು ಬಿದಿರಿನಿಂದ ನಿರ್ಮಿತವಾಗಿರುವ ಗುಡಿಸಲನ್ನು ಹಾಕಿಕೊಂಡು ಕಳೆದ 65 ವರ್ಷಗಳಿಂದ ಕಾಡಿನ ಮಧ್ಯೆ ಸಿಗುವ ಗೆಡ್ಡೆ ಗೆಣಸುಗಳು ಸೇರಿದಂತೆ ಇತರೆ ಆಹಾರಗಳನ್ನ ಹುಡುಕಿ ಜೀವನ ನಡೆಸುತ್ತಿದ್ದಾರೆ.
ಅದರಲ್ಲಿ ಈ ಹಾಡಿಯ ಲತಾ ಎಂಬ ಮಹಿಳೆ ಕಳೆದ 2 ವರ್ಷಗಳ ಹಿಂದೆ ಗಂಡ ಗಣೇಶ ತೀರಿಕೊಂಡರು. ಈ ಸಂದರ್ಭದಲ್ಲಿ ತನ್ನ ಇಬ್ಬರು ಮಕ್ಕಳನ್ನ ಗಿರಿಜನ ಆಶ್ರಮ ಶಾಲೆಯಲ್ಲಿ ಓದಲು ಬಿಟ್ಟು ಕಾಡಿನ ಮಧ್ಯೆಯೇ ಗುಡಿಸಿಲಿನಲ್ಲಿ ವಾಸವಿದಳು. ಸಂಜೆ ಸಮಯದಲ್ಲಿ ಕಾಡಾನೆಗಳ ಹಿಂಡೊಂದು ಈಕೆಯ ಗುಡಿಸಿಲಿನ ಮೇಲೆ ದಾಳಿ ಮಾಡಿ ಗುಡಿಸಲನ್ನ ಧ್ವಂಸ ಮಾಡಿದವು.ಇದರಿಂದ ದಿಕ್ಕು ತೋಚದ ಈಕೆ ಪಕ್ಕದ ಮರದ ಮೇಲೆ ಬಿದಿರಿನಿಂದ ಸಣ್ಣದೊಂದು ಗುಡಿಸಲನ್ನು ನಿರ್ಮಾಣ ಮಾಡಿ ವಾಸಿಸುತಿದ್ದಳು. ಬೆಳಗ್ಗೆ ತನಗೆ ಬೇಕಾದ ಆಹಾರವನ್ನು ಮರದ ಕೆಳಗಡೆ ತಯಾರಿಸಿ ರಾತ್ರಿ ಸಮಯದಲ್ಲಿ ಮರದ ಮೇಲೆ ವಾಸಮಾಡುತ್ತಿದ್ದಾಳೆ.
ಕಾನೂನಿನ ತೊಡಕು: ಮೀಸಲು ಅರಣ್ಯ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಈ ಗಿರಿ ಜನ ಕುಟುಂಬಗಳಿಗೆ ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಿಸಿ ಕೊಡಲು ಕಾನೂನಿನ ತೊಡಕ್ಕಿದು ಇಲ್ಲಿ ಮನೆ ನಿರ್ಮಿಸಲು ಸಾದ್ಯವಿಲ್ಲ. ಹಾಡಿಯ ಕುಟುಂಬದವರಿಗೆ ಅರಣ್ಯ ಬಿಟ್ಟು ಹೊರ ಬಂದರೆ ಮೂಲ ಭೂತ ಸೌಲಭ್ಯ ಹೊದಗಿಸುವುದಾಗಿ ಅಧಿಕಾರಿಗಳು ಹೇಳಿದರು ಕಾಡನ್ನ ಬಿಟ್ಟು ಬರದ ಇವರು ಕಾಡು ಪ್ರಾಣಿಗಳಂತೆ ಬದುಕುತ್ತಿದ್ದು, ಕೆಲವು ಕಾಡು ಪ್ರಾಣಿಗಳಿಂದಲೇ ಅಪಾಯಕ್ಕೊಳಾಗುತ್ತಾರೆ.