ಮೈಸೂರು: ರಾಜ್ಯದಲ್ಲಿ ರಾಜಕಾರಣಿಗಳು ಮತ್ತು ಅವರ ಮಕ್ಕಳೇ ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ. ಇದರಿಂದಲೇ ಇದು ಇಷ್ಟೊಂದು ದೊಡ್ಡದಾಗಿ ಬೆಳೆಯುವುದಕ್ಕೆ ಸಾಧ್ಯವಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಸ್ಯಾಂಡಲ್ವುಡ್ ನಟ-ನಟಿಯರ ಮೇಲೆ ಡ್ರಗ್ಸ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೈಸೂರಿನ ಹೈಸ್ಕೂಲ್ ಮತ್ತು ಕಾಲೇಜುಗಳಲ್ಲಿ ಹೆರಾಯ್ನ್, ಮಾದಕ ಪದಾರ್ಥ ಮಾರಾಟವಾಗುತ್ತಿದೆ. ರಾಜಕಾರಣಿಗಳೇ ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ. ಅವರ ಮಕ್ಕಳೇ ಇದರಲ್ಲಿ ಶಾಮೀಲು ಆಗಿದ್ದಾರೆ. ರಾಜಕಾರಣಿಗಳೇ ಪೊಲೀಸರ ಕೈಕಟ್ಟಿ ಹಾಕಿದ್ದಾರೆ. ಸಾವಿರಾರು ಕೋಟಿ ದಂಧೆ ಮಾಡುತ್ತಿದ್ದಾರೆ. ಪ್ರಕರಣ ಹೊರ ಬಂದಾಗ ಜಾಮೀನು ಪಡೆದು ಹೊರಗೆ ಬರ್ತಾರೆ. ಬಳಿಕ ಇದೇ ರೀತಿ ಡ್ರಗ್ಸ್ ದಂಧೆ ಮಾಡ್ತಾರೆ ಎಂದು ಆರೋಪಿಸಿದರು.
ಇವತ್ತಿನಿಂದ ನಾವು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಮೈಸೂರಿನ ಹಲವು ಕಾಲೇಜಿನಲ್ಲಿ ಈ ಜಾಲ ಇದೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಜನಾಂದೋಲನ ಶುರು ಮಾಡುತ್ತೇವೆ ಎಂದರು.
ಹೊರ ದೇಶದ ವಿದ್ಯಾರ್ಥಿಗಳು ಲಕ್ಷಾಂತರ ರೂ. ಖರ್ಚು ಮಾಡಿಕೊಂಡು ಕಾಲೇಜು ಸೇರುತ್ತಾರೆ. ಈಗಲೂ ಹಾಸ್ಟೆಲ್ ಗಳ ಮೇಲೆ ದಾಳಿ ಮಾಡಿ. ನಾನು ಚಾಲೆಂಜ್ ಮಾಡುತ್ತೇನೆ. ಹಾಸ್ಟೆಲ್ ಗಳನ್ನು ಚೆಕ್ ಮಾಡಿದರೆ ಡ್ರಗ್ಸ್, ಹೆರಾಯಿನ್ ಎಲ್ಲವೂ ಸಿಗುತ್ತವೆ ಎಂದು ಆರೋಪಿಸಿದರು.
ತಮ್ಮ ಬಳಿ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿರುವ 32 ರಾಜಕಾರಣಿಗಳ ಪಟ್ಟಿ ಇದ್ದು, ಅದನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.