ಮೂಡಿಗೆರೆ: ಕಾಫಿ ಬೆಳಗಾರರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಎಲ್ಲ ಸವಾಲುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾದರೆ ಬೆಳಗಾರರು ಸಂಘಟಿತರಾಗಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ.ಮೋಹನ್ ಕುಮಾರ್ ಕರೆ ನೀಡಿದರು.
ಅವರು ಮೂಡಿಗೆರೆ ಪ್ಲಾಂಟರ್ಸ್ ಕ್ಲಬ್ ಆವರಣದಲ್ಲಿ ಬೆಳಗಾರರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಕರ್ನಾಟಕ ಬೆಳೆಗಾರರ ಒಕ್ಕೂಟದ ೨೫ನೇ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರ ಕಾಫಿ ಬೆಳೆಗಾರರ ನೆರವಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ, ರಾಷ್ಟ್ರದ ವಿದೇಶಿ ವಿನಿಮಯದಲ್ಲಿ ಕಾಫಿ ಬೆಳಗಾರರ ಪಾತ್ರ ಪ್ರಮುಖವಾಗಿದೆ. ಇಂದು ಪ್ರಾಕೃತಿಕ ವಿಕೋಪ, ಮಾರುಕಟ್ಟೆ ಏರಿಳಿತ, ಕಾಫಿ ಉತ್ಪಾದನಾ ವೆಚ್ಚದ ಹೆಚ್ಚಳದಿಂದ ಬೆಳೆಗಾರರು ತೀವ್ರ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಕಾಫಿ ಬೆಳೆಗಾರರಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಆಗ್ರಹಿಸಿದರು.
ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಮಾತನಾಡಿ, ಸರಕಾರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಬೆಳೆಗಾರರಿಗೆ ನೀಡುವ ಕಾಯ್ದೆ ಈ ಹಿಂದಿನ ಸರಕಾರದ ಅವಧಿಯಲ್ಲಿ ಅನುಮೋದನೆ ದೊರೆತಿದೆ. ಇದೀಗ ಇದರ ಅನುಷ್ಠಾನದ ವಿಚಾರವಾಗಿ ವಿಶೇಷವಾಗಿ ಅರಣ್ಯ ಮತ್ತು ಕಂದಾಯ ಭೂಮಿ ವಿಷಯದಲ್ಲಿ ಇರುವ ತಡೆಯನ್ನು ಸರಕಾರ ನಿವಾರಿಸಬೇಕು. ಕಾಫಿ ಬೆಳಗಾರರಿಗೆ ೧೦ ಎಚ್.ಪಿ. ವರೆಗಿನ ವಿದ್ಯುತ್, ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಜತೆಗೆ ಕಾಡಾನೆ ಮತ್ತು ಮಾನವ ಸಂಘರ್ಷದ ವಿಷಯದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದ ಎಂದು ಹೇಳಿದರು.
ಕೆಜಿಎಫ್ ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ, ಬಿ.ಎಂ.ನಾಗರಾಜ್, ಎ.ಕೆ.ವಸಂತೇಗೌಡ, ಎ.ಎನ್.ನಾಗರಾಜು, ಕೆ.ವಿ.ನರೇಂದ್ರ, ಮನೋಹರ್, ಜಗನ್ನಾಥ್, ಬಿ.ಎಸ್.ಜಯರಾಮ್, ಹಳಸೆ ಶಿವಣ್ಣ ಮತ್ತಿತರರಿದ್ದರು.