ಶಿವಮೊಗ್ಗ: ಜಾತಕ ಸರಿಯಿಲ್ಲವೆಂದು ಯುವಕನ ಮನೆಯವರು ಮದುವೆಗೆ ಒಪ್ಪದ ಕಾರಣ ಯುವತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ ಟೇಬಲ್ ಕಲ್ಲಾಪುರದ ಸುಧಾ(29) ಮೃತಪಟ್ಟವರು.
ಅರಣ್ಯ ಇಲಾಖೆ ನೌಕರ ಬೆಳಗಾವಿಯ ಪ್ರವೀಣ್ ಅವರನ್ನು ಆರು ವರ್ಷಗಳಿಂದ ಸುಧಾ ಪ್ರೀತಿಸಿದ್ದರು. ಜಾತಿ ಬೇರೆಯಾಗಿದ್ದರು ಇವರ ಪ್ರೀತಿಗೆ ಅಡ್ಡಿಯಾಗಿರಲಿಲ್ಲ. ಆದರೆ, ಪ್ರವೀಣ್ ಅವರ ತಾಯಿ ಯುವತಿಯ ಜಾತಕವನ್ನು ಜ್ಯೋತಿಷಿಗೆ ತೋರಿಸಿದಾಗ ಯುವತಿಗೆ ಕುಜದೋಷವಿದ್ದು, ಆಕೆಯೊಂದಿಗೆ ಮದುವೆ ಮಾಡಿದರೆ ಮಗನ ಆಯಸ್ಸು ಕಡಿಮೆಯಾಗಲಿದೆ. ಆತ ಸಾಯುತ್ತಾನೆ ಎಂದು ತಿಳಿಸಿದ್ದಾರೆ.
ಇದರಿಂದಾಗಿ ಪ್ರವೀಣ್ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಪ್ರವೀಣ್ ಕೂಡ ದೂರವಾಗ ತೊಡಗಿದ್ದ. ಇದರಿಂದಾಗಿ ಮನನೊಂದ ಸುಧಾ ಮೇ 31ರಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಭದ್ರಾವತಿ ಹಳೆನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.