ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಡುಬ ಬಳಿ ತಂದೆಯೊಬ್ಬರು ತಮ್ಮ ಮಗನನ್ನು ವಸತಿ ಶಾಲೆಗೆ ಸೇರಿಸಿ ಪತ್ನಿ ಹಾಗೂ ಮಗಳೊಂದಿಗೆ ವಾಪಸ್ ಬರುವಾಗ ನಿಯಂತ್ರಣ ತಪ್ಪಿದ ಕಾರು ಉರುಳಿ ಬಿದ್ದ ಪರಿಣಾಮ ತಂದೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಮೃತ ದುರ್ದೈವಿ ತರೀಕೆರೆಯ ವಕೀಲ ಸಂಪತ್ ಎಂಬವರು ತಮ್ಮ ಮಗನನ್ನು ಮೂಡುಬಿದರೆಯ ವಸತಿ ಶಾಲೆಗೆ ಸೇರಿಸಿ ಭಾನುವಾರದಂದು ತಮ್ಮ ಪತ್ನಿ ಹಾಗೂ ಮಗಳೊಂದಿಗೆ ವಾಪಸ್ ಊರಿಗೆ ತೆರಳುತ್ತಿದ್ದರು.
ಮಧ್ಯಾಹ್ನದ ಸುಮಾರಿಗೆ ಮುಡಬ ಚೌಡೇಶ್ವರಿ ದೇವಸ್ಥಾನದ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಅಡಿಕೆ ತೋಟದಲ್ಲಿ ಮಗುಚಿ ಬಿದ್ದಿದೆ. ಇದರ ಪರಿಣಾಮ ಸಂಪತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಅವರ ಪತ್ನಿ ಹಾಗೂ ಮಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.