ಶಿವಮೊಗ್ಗ: ವರದಕ್ಷಿಣೆ ಕಿರುಕುಳ ಹಿನ್ನಲೆಯಲ್ಲಿ ನವವಿವಾಹಿತೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ವಿವಾಹಿತೆಯ ತಂದೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದೇ ವರ್ಷ ಮೇ ತಿಂಗಳಲ್ಲಿ ದಿಗೇಟಿಕೊಪ್ಪದ ಈಶ್ವರ ಎಂಬುವರೊಂದಿಗೆ ಸೊರಬದ ಹೊಸಬಾಳೆ ಗ್ರಾಮದ ಯವತಿ ಸುಶ್ಮಿತಾಳನ್ನ(23) ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆ ಆಗಿ ಏಳು ತಿಂಗಳು ಕಳೆಯುವ ಒಳಗೆ ನವವಿವಾಹಿತೆ ನೇಣುಬಿಗಿದು ಕೊಂಡು ಸಾವನ್ನಪ್ಪಿದ್ದಾಳೆ.
ಮಗಳ ಸಾವಿಗೆ ಗಂಡನಮನೆಯವರ ವರದಕ್ಷಿಣೆ ಕಿರುಕುಳವೇ ಕಾರಣವೆಂದು ಗೃಹಿಣಿಯ ತಂದೆ ಹನುಮಂತಪ್ಪ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಗಂಡ ಈಶ್ವರ ಮತ್ತು ತಾಯಿ ಮಂಜಮ್ಮ ಮದುವೆಯ ಹೊಸದರಲ್ಲಿಯೇ ಪೀಡಿಸುತ್ತಿದ್ದು ಮಗಳು ಈ ಬಗ್ಗೆ ಹೇಳಿದ್ದಳು ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಗಂಡ ಈಶ್ವರ ಮತ್ತು ಅತ್ತೆ ಮಂಜಮ್ಮನವರನ್ನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮಗಳ ಆತ್ಮಹತ್ಯೆಯನ್ನ ಗಂಡನ ಮನೆಯವರು ಕರೆ ಮಾಡಿ ತಿಳಿಸದೆ, ಬೇರೆಯವರ ಮೂಲಕ ತಿಳಿಯಲ್ಪಟ್ಟಿರುತ್ತದೆ ಎಂದು ತಂದೆ ಹನುಮಂತಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ಹೋದ ಮೇಲೆ ನಮಗೆ ಮಗಳ ಸಾವು ತಿಳಿದಿರುವುದಾಗಿ ಹೇಳಿದ್ದಾರೆ.
ಸಹಾಯವಾಣಿಗೆ ಕರೆ ಮಾಡಿ:
ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟೇಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದ್ದು