ಉಜಿರೆ: ಊರಿನಲ್ಲಿ ಬೇರೆ ಬೇರೆ ದೇವರಿದ್ದರೂ ಜೀವಿಗೆ ಮೋಕ್ಷ ಕೊಡುವವನು ಜನಾರ್ದನ ಸ್ವಾಮಿ ಮಾತ್ರ. ಇತರ ದೇವರಲ್ಲಿ ಜನಾರ್ದನ ಸ್ವಾಮಿ ಸನ್ನಿಹಿತನಾಗಿದ್ದುಕೊಂಡು ಪ್ರತಿಯೊಬ್ಬನ ಕರ್ಮಗಳನುಸಾರ ಆತನಿಗೆ ಮೋಕ್ಷ ಕರುಣಿಸುತ್ತಾನೆ. ಅವನೊಳಗಿದ್ದ ಪರಮಾತ್ಮ ಸುಪ್ರೀತನಾಗಿ ಅವನಿಗೆ ಉತ್ತಮವಾದುದನ್ನೇ ಅನುಗ್ರಹಿಸುತ್ತಾನೆ ಎಂದು ಉಡುಪಿ ಅಷ್ಟಮಠಗಳಲ್ಲೊಂದಾದ ಶ್ರೀ ಮದ್ಧ್ವಾಚಾರ್ಯರ ಮೂಲ ಸಂಸ್ಥಾನದ ಶ್ರೀ ವಾಮನ ತೀರ್ಥ ಪರಂಪರೆಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಗಳವರು ಅನುಗ್ರಹ ಸಂದೇಶ ನೀಡಿದರು.
ಅವರು ಡಿ. 29 ರಂದು ಸಂಜೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಜನಾರ್ದನ ಸ್ವಾಮಿ ಹಾಗೂ ಪರಿವಾರ ದೇವರು ಮತ್ತು ಶ್ರೀ ಮಧ್ವಾಚಾರ್ಯರ ಸನ್ನಿಧಾನ ದರ್ಶನ ಪಡೆದು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಆಶೀರ್ವಚನ ನೀಡುತ್ತಿದ್ದರು. ಉಚ್ಚಭೂತಿ ಮೂಲ ಹೆಸರಿನ ಉಜಿರೆ ಸಂಪದ್ಭರಿತ ಊರು. ದೇವಸ್ಥಾನಕ್ಕೆ ಜನ ಜಾಸ್ತಿ ಬಂದರೆ ಭಗವಂತ ಸುಪ್ರೀತನಾಗಿ ಭಕ್ತರನ್ನು ಅನುಗ್ರಹಿಸುತ್ತಾನೆ. ಭಕ್ತರ ಸಾಮೂಹಿಕ ಪ್ರಾರ್ಥನೆಗೆ ವಿಶೇಷ ಶಕ್ತಿ,ಸಾನಿಧ್ಯ ದೊರೆಯುತ್ತದೆ. ಪರಮಾತ್ಮ ಎಲ್ಲರಿಗೂ ಅನುಗ್ರಹ ಮಾಡಲಿ ಎಂದು ನುಡಿದರು.
ಶ್ರೀಗಳವರು ಪೂರ್ವಾಶ್ರಮದಲ್ಲಿ ಮೂಲತಃ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಮಚ್ಚಳೆ ಮನೆತನದವರಾಗಿದ್ದು ಶೀ ರೂರು ಮಠದ ಉತ್ತರಾಧಿಕಾರಿಯಾಗಿ ನಿಯುಕ್ತರಾದ ಬಳಿಕ ಮೊದಲ ಬಾರಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಯತಿವರ್ಯರಿಗೆ ವಾದ್ಯವೈಭವದಿಂದ ಬರಮಾಡಿಕೊಂಡು ದೇವಸ್ಥಾನದ ಪರವಾಗಿ ಶರತ್ ಕೃಷ್ಣ ಪಡುವೆಟ್ನಾಯರು ಮಾಲಾರ್ಪಣೆಗೈದು,ಫಲ ಕಾಣಿಕೆ ಸಮರ್ಪಿಸಿ ಗೌರವಿಸಿದರು.
ಆಮಂತ್ರಣ ಅನಾವರಣ ಇದೆ ಸಂದರ್ಭದಲ್ಲಿ ಮುಂದಿನ ಫೆ. 7 ರಿಂದ 9 ರ ವರೆಗೆ ಕನ್ಯಾಡಿಯಲ್ಲಿ ತುಳು ಶಿವಳ್ಳಿ ಸಭಾ ವತಿಯಿಂದ ಭಕ್ತರ ಸಹಕಾರದಿಂದ ನಿರ್ಮಾಣಗೊಂಡ ನೂತನ ಗುಡಿಗಳಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಹಾಗು ಪರಿವಾರ ದೇವರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀಗಳವರು ಅನಾವರಣಗೊಳಿಸಿ ನಿಯೋಜಿತ ಕಾರ್ಯಕ್ರಮಗಳು ಶ್ರೀ ದೇವರ ಅನುಗ್ರಹದಿಂದ ಯಶಸ್ವಿಯಾಗಿ ನಡೆಯಲಿ ಎಂದು ಆಶಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ,ಕಾರ್ಯದರ್ಶಿ ರಾಜಪ್ರಸಾದ ಪೊಲ್ನಾಯ ,ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಹರೀಶ್ ರಾವ್ ಮುಂಡ್ರು ಪ್ಪಾಡಿ ,ಕಾರ್ಯದರ್ಶಿ ಪರಾರಿ ವೆಂಕಟ್ರಮಣ ಹೆಬ್ಬಾರ್,ಕೋಶಾಧಿಕಾರಿ ಗಿರೀಶ್ ಕುದ್ರೆನ್ತಯ,ಶ್ರೀಶ ಮುಚ್ಚಿನ್ನಾಯ ,ಅನಂತಕೃಷ್ಣ ಕೊಯ್ಯುರು ,ಸತ್ಯನಾರಾಯಣ ಎರ್ಕಾಡಿತ್ತಾಯ ,ಸೀತಾರಾಮ ಪುತ್ರಾಯ , ಸಾಂತೂರು ಶ್ರೀನಿವಾಸ ತಂತ್ರಿ ಮತ್ತು ಶ್ರೀ ಮಠದ ಶಿಷ್ಯವೃಂದ ಉಪಸ್ಥಿತರಿದ್ದರು. ಶ್ರೀ ಅಯ್ಯಪ್ಪಸ್ವಾಮಿ ಹಾಗೂ ಪರಿವಾರ ದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕಲಶ ಕೂಪನ್ ರಶೀದಿ ಪುಸ್ತಕವನ್ನು ಗೌರವಾಧ್ಯಕ್ಷ ವಿಜಯರಾಘವ ಪಡುವೆಟ್ನಾಯರು ಪಡುವೆಟ್ಟು ಮನೆಯಲ್ಲಿ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.