ಶಿವಮೊಗ್ಗ: ಭಾನುವಾರ ಬೆಳಿಗ್ಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ನಾಲ್ಕು ಜನ ಶಿವಮೊಗ್ಗದಿಂದ ಹೊರಟಿದ್ದರು. ಬರುವಾಗ ಒಂದು ಬ್ಯಾಗ್ ಮರೆತು ಬಂದ ಕಾರಣದಿಂದಾಗಿ ಆ ನಾಲ್ಕು ಜನ ತಮ್ಮ ಮನೆಯವರಿಗೆ ಬ್ಯಾಗನ್ನು ತಂದು ಕೊಡಲು ದೂರವಾಣಿ ಮೂಲಕ ಒತ್ತಾಯಿಸಿದರು.
ಅಷ್ಟರಲ್ಲಿ ರೈಲು ಭದ್ರಾವತಿ ಸ್ಟೇಷನ್ ಗೆ ಬಂದು ತಲುಪಿತ್ತು. ಆಗ ಆ ಮನೆಯವರು ನೀವು ರೈಲಿನ ಚೈನ್ ಎಳೆಯಿರಿ. ಈಗ ಬರುತ್ತೇನೆ ಎಂದು ಹೇಳಿದರು. ತಕ್ಷಣ ಆ ನಾಲ್ಕು ಜನರ ಪೈಕಿ ಒಬ್ಬ ರೈಲಿನ ಚೈನ್ ಎಳೆದ. ರೈಲು ಭದ್ರಾವತಿ ದಾಟಿದ ಕೆಲವೇ ಕ್ಷಣದಲ್ಲಿ ನಿಂತಿತು.
ತಕ್ಷಣ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಯಾವ ಬೋಗಿಯಲ್ಲಿ ಚೈನ್ ಎಳೆದಿದ್ದಾರೆ ಎಂದು ಪರಿಶೀಲಿಸಿ, ಸಂಬಂಧಪಟ್ಟ ಆ ನಾಲ್ಕು ಜನರನ್ನು ರೈಲಿನಿಂದ ಕೆಳಗಿಳಿಸಿ, ರೈಲು ಹೋಗುವುದಕ್ಕೆ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ರೈಲು ಸುಮಾರು ಹತ್ತು ನಿಮಿಷ ತಡವಾಗಿ ಹೊರಟಿತು. ಈಗ ಆ ನಾಲ್ಕು ಜನ ಹಾಗೂ ಚೈನ್ ಎಳೆಯಲು ಹೇಳಿದ ಅವರ ಮನೆಯವರಿಗೆ ಭದ್ರಾವತಿ ರೈಲ್ವೇ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.