ರಿಪ್ಪನ್ಪೇಟೆ: ಜಾನುವಾರುಗಳಿಗೆ ಬಾಧಿಸಿರುವ ಚರ್ಮ ಗಂಟು ರೋಗ ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ಮೊದಲ ಬಲಿ ಪಡೆದಿದೆ.
ಕರಿಗೆರಸು ಗ್ರಾಮದ ಹಿಂಡ್ಲೆಮನೆ ಶ್ರೀನಿವಾಸ ಹೆಚ್.ಕೆ ಎಂಬುವವರಿಗೆ ಸೇರಿದ ಸುಮಾರು 25 ಸಾವಿರ ರೂ. ಬೆಲೆಬಾಳುವ ಹೋರಿಯೊಂದು ಕಳೆದ ನಾಲ್ಕೈದು ದಿನಗಳಿಂದ ಚರ್ಮ ಗಂಟು ರೋಗದಿಂದ ಬಳಲುತ್ತಿತ್ತು. ಪಶುವೈದ್ಯರು ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದು ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ಇದು ಮೊದಲ ಬಲಿಯಾಗಿದೆ.
ಘಟನಾ ಸ್ಥಳಕ್ಕೆ ಕೋಡೂರು ಪಶು ಆಸ್ಪತ್ರೆಯ ವೈದ್ಯ ಪಣಿರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮಲೆನಾಡು ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಹರಡಿರುವ ಚರ್ಮ ಗುಂಟು ರೋಗದಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ಜಾನುವಾರುಗಳಲ್ಲಿ ತೀವ್ರವಾಗಿ ಹರಡಿರುವ ಚರ್ಮ ಗಂಟು ರೋಗ ಬಾಧೆ ರೈತರನ್ನು ಚಿಂತೆಗೆ ದೂಡಿದೆ. ಇದೊಂದು ಸಾಂಕ್ರಾಮಿಕ ರೋಗವಾಗಿರುವುದರಿಂದ ಒಂದು ಜಾನುವಾರುವಿನಿಂದ ಮತ್ತೊಂದು ಜಾನುವಾರುವಿಗೆ ಅತಿ ವೇಗವಾಗಿ ಹರಡುತ್ತದೆ. ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಲಸಿಕೆ ಪಡೆಯಲು ಪಶು ಇಲಾಖೆ ಸೂಚಿಸಿದೆ.
ಚರ್ಮ ಗಂಟು ರೋಗವು ಇದೊಂದು ವೈರಾಣು ರೋಗವಾಗಿದೆ. ಇದಕ್ಕೆ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ಜಾನುವಾರುಗಳಿಗೆ ರೋಗ ಬಾರದಂತೆ ನೋಡಿಕೊಳ್ಳಬೇಕಾದರೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಕಾಪಾಡಿಕೋಂಡರೆ ಮಾತ್ರ ರೋಗವನ್ನು ನಿಯಂತ್ರಿಸಲು ಸಾಧ್ಯ ಹಾಗೂ ಈ ರೋಗದಿಂದ ಜಾನುವಾರುಗಳನ್ನ ಕಳೆದು ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತಿದೆ ಎಂದು ಸ್ಥಳೀಯ ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಆರಂಭದಲ್ಲಿ ಇದ್ದಕ್ಕಿದ್ದಂತೆ ದನ-ಕರುಗಳ ಮೈ ಮೇಲೆ ಚರ್ಮಗಂಟು ಕಾಣಿಸಿಕೊಳ್ಳುತ್ತದೆ. ಆ ನಂತರ ಗಾಯ. ಗಾಯದಿಂದ ಕೀವು ಉಂಟಾಗಿ ಜ್ವರದ ಮೂಲಕ ನಿತ್ರಾಣಗೊಳ್ಳುತ್ತಿವೆ. ಈ ವಿಚಿತ್ರ ಕಾಯಿಲೆಯಿಂದ ಅನ್ನದಾತ ಆತಂಕಗೊಂಡು ಕಂಗಾಲಾಗಿದ್ದಾನೆ.
ಈ ಒಂದು ಚರ್ಮಗಂಟಿನಿಂದ ಹಸು ಮತ್ತು ಕರುಗಳಿಗೆ ಜ್ವರ ಕೂಡ ಕಾಣಿಸಿಕೊಳ್ಳುತ್ತಿದೆ. ವಿಪರೀತ ಜ್ವರಕ್ಕೆ ಕೆಲ ಜಾನುವಾರುಗಳು ಕೂಡ ನಿತ್ರಾಣಗೊಳ್ಳುತ್ತಿವೆ. ಚರ್ಮಗಂಟು ರೋಗವನ್ನು ಲಂಪಿಸ್ಕಿನ್ ಎಂಬ ಸೊಳ್ಳೆಗಳು ಈ ಕಾಯಿಲೆಯನ್ನು ಹೆಚ್ಚು ಹರಡುತ್ತಿವೆ. ಈ ಕಾಯಿಲೆ ಕಾಣಿಸಿಕೊಂಡ ಜಾನುವಾರುಗಳಿಗೆ ದೇಹದ ಎಲ್ಲಾ ಕಡೆಗಳಲ್ಲೂ ಗಂಟುಗಳು ಕಾಣಿಸಿಕೊಳ್ಳುತ್ತವೆ. ಕೆಲ ಗಂಟುಗಳು ದೊಡ್ಡದಾಗಿ ಕೀವು ತುಂಬಿಕೊಂಡು ನಂತರ ಒಡೆದುಕೊಳ್ಳವ ಮೂಲಕ ಗಾಯಗಳಾಗುತ್ತಿವೆ.
ಇದಕ್ಕೆ ತಕ್ಷಣ ಔಷಧಿ ದೊರಕಿದಲ್ಲಿ ಹೆಚ್ಚಿನ ಬಲಿಗಳನ್ನು ತಡೆಯಲು ಸಾಧ್ಯವಾಗಬಹುದಾಗಿದೆ. ಈ ನಿಟ್ಟಿನಲ್ಲಿ ಸರಕಾರ, ಆರೋಗ್ಯ ಇಲಾಖೆ ಯಾವ ಕ್ರಮ ಕೈಗೊಳ್ಳುವುದು ಎಂಬುದನ್ನು ಕಾದು ನೋಡಬೇಕಿದೆ.