ಶಿವಮೊಗ್ಗ: ನಗರದಲ್ಲಿ ಶಾಂತಿ- ಸೌಹಾರ್ದತೆ ಕದಡುವ ಘಟನೆಗಳು ನಡೆಯುತ್ತಿದ್ದು. ಇವುಗಳನ್ನು ಹತ್ತಿಕ್ಕಲು ಜಿಲ್ಲಾಡಳಿತ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕೆಂದು ನಗರ ಸಮಾನ ಮನಸ್ಕರ ವೇದಿಕೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರನ್ನು ಭೇಟಿ ಮಾಡಿದ ಸಮಾಜಮುಖಿ ಸಮಾನ ಮನಸ್ಕರಾದ ವಕೀಲ ಶ್ರೀಪಾಲ್ , ರೈತ ಸಂಘದ ಹೆಚ್. ಆರ್ ಬಸವರಾಜಪ್ಪ, ಪತ್ರಕರ್ತರಾದ ಟೆಲೆಕ್ಸ್ ರವಿಕುಮಾರ್, ಆರ್ ಎಸ್ ಹಾಲಸ್ವಾಮಿ( ಭಾರತ್ ಟಿವಿ)ಎನ್. ಮಂಜುನಾಥ್ ( ಕ್ರಾಂತಿದೀಪ), DSS ನ ಗುರು ಮೂರ್ತಿ, ಸಾಮಾಜಿಕ ಕಾರ್ಯಕರ್ತರಾದ ಸುರೇಶ್ ಅರಸಾಳು , ಚಟ್ನಳ್ಳಿ ನಾಗರಾಜ್, ಹರಿಗೆ ರವಿ ಅವರಿದ್ದ ನಿಯೋಗ ನಗರದಲ್ಲಿ ಇತ್ತೀಚೆಗೆ ನಡೆದ ಶಾಂತಿ ಕದಡಿದ ಘಟನೆಗಳ ಕುರಿತು ಸಮಾಲೋಚನೆ ನಡೆಸಿತು.
ಇತ್ತೀಚೆಗಿನದಿನಗಳಲ್ಲಿ ಸೌಹಾರ್ದತೆ ಕದಡುವ ಕೃತ್ಯಗಳು ಮತೀಯ ಸಂಘಟನೆ ಗಳಿಂದ ನಡೆಯುತ್ತಿವೆ. ಇದಕ್ಕೆ ರಾಜಕೀಯ ಕುಮ್ಮಕ್ಕು ಇದೆ. ಇದರಿಂದ ಮುಂದಿನ ದಿನಗಳಲ್ಲೂ ಅಹಿತಕರ ಘಟನೆಗಳು ನಡೆಯುವ ಆತಂಕ ಇದೆ. ಅಧಿಕಾರಸ್ಥರೆ ಪ್ರಚೋದನಾಕಾರಿಹೇಳಿಕೆಗಳನ್ನು ನೀಡುತ್ತಿರುವುದು ಸಲ್ಲದು. ಇಂತಹ ಹೇಳಿಕೆ ನೀಡುವವರು ಯಾರೇ ಆಗಿದ್ದರೂ ನಿಷ್ಪಕ್ಷಪಾತವಾಗಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ನಿಯೋಗವು ಆಗ್ರಹಿಸಿತು.
ಆಗ್ಗಾಗ್ಗೆ ನಡೆಯುತ್ತಿರುವ ಕೋಮು ಸೌಹಾರ್ದ ಕದಡುವ ಘಟನೆಗಳಿಂದಾಗಿ ಶಿವಮೊಗ್ಗ ನಗರ ನಾಗರಿಕ ರು ಆತಂಕ ದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ, ದಿನದ ದುಡಿಮೆಯನ್ನು ನಂಬಿರುವ ಬೀದಿ ಬದಿಯ ಸಣ್ಣ ಪುಟ್ಟ ವ್ಯಾಪಾರಿಗಳ ಬದುಕು ಅಸಹನೀಯ ವಾಗುತ್ತಿದೆ , ಇನ್ನೂ ಶಾಲಾ ಕಾಲೇಜುಗಳ ಮಕ್ಕಳ ಪೋಷಕರ ಆತಂಕ ಹೆಚ್ಚಾಗುತ್ತಿದೆ. ನಗರದ ಎಲ್ಲೆಡೆ ಬೇಕಾಬಿಟ್ಟಿ ಫ್ಲೆಕ್ಸ್ ಹಾಕುವುದರಿಂದ ನಗರ ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ .ಜೊತೆಗೆ ಈ ಎಲ್ಲಾ ಕಾರಣಗಳಿಂದ ಶಿವಮೊಗ್ಗ ನಗರದ ಆರ್ಥಿಕತೆ ಕುಂಟಿತಗೊಳ್ಳುತ್ತಿದೆ ಎಂಬ ವಿಚಾರವಾಗಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
ನಗರದ ಶಾಂತಿ ಕದಡುವ ಕೆಲವು ಮನಸ್ಥಿತಿಯುಳ್ಳ ವ್ಯಕ್ತಿ ಗಳನ್ನು ಹದ್ದುಬಸ್ತಿನಲ್ಲಿ ಇಡುವ ಬಗ್ಗೆ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುವವರ ಬಗ್ಗೆ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಸುದ್ದಿ ಹಂಚುವವರ ಬಗ್ಗೆ ನಿಗವಹಿಸ ಬೇಕು ಮತ್ತು ನಗರದ ಪರಿಸರ ಮತ್ತು ಶಾಂತಿ ಯನ್ನು ಕಾಪಾಡುವ ಸಲುವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ವಿಚಾರವಾಗಿ ಈ ಎಲ್ಲಾ ಸಂಘಟನೆಗಳು ಸದಾ ಜಿಲ್ಲಾಡಳಿತ ದೊಂದಿಗೆ ಇರುವುದಾಗಿ ಸಭೆಯಲ್ಲಿ ಹಾಜರಿದ್ದ ವಿವಿಧ ಸಂಘಟನೆಗಳ ಪ್ರಮುಖರು ಹೇಳಿದರು.
ಸಮಾನಮನಸ್ಕರ ವೇದಿಕೆಯ ಸದಸ್ಯರ ಅಭಿಪ್ರಾಯಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೂಳ್ಳುವದಾಗಿ ಭರವಸೆ ನೀಡಿದರು.