ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತ ಹರ್ಷನ ಕೊಲೆಯ ಹಿಂದಿರುವ ಸೂತ್ರಧಾರರನ್ನು ಬಂಧಿಸುವಂತೆ ಆಗ್ರಹಿಸಿ, ಶಿವಮೊಗ್ಗ ಜಿಲ್ಲಾ ವಿಶ್ವ ಹಿಂದೂ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸೇರಿದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು, ಕೊಲೆ ಸಂಚು ಮಾಡಿರುವ ಮತ್ತು ಪ್ರೇರೇಪಿಸಿರುವ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
ಇದು ಹಿಂದೂ ಸಮಾಜವನ್ನು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಭಯಭೀತರನ್ನಾಗಿಸಲು ಪಿಎಫ್ಐ ಹಾಗೂ ಎಸ್ಡಿಪಿಐ ಸಂಘಟನೆಗಳು ಮಾಡಿರುವ ದೊಡ್ಡ ಸಂಚಿನ ಭಾಗವಾಗಿದೆ. ಇಂತಹ ಕೊಲೆಗಡುಕರ ಮೇಲೆ ಯುಎಪಿಎ ಕಾಯ್ದೆಯಡಿ ಕೇಸು ದಾಖಲಿಸಿ, ಭಯೋತ್ಪಾದನಾ ಕೃತ್ಯವೆಂಬಂತೆ ಪರಿಗಣಿಸಲು ಒತ್ತಾಯಿಸಿದರು.
ಪಿಎಫ್ಐ, ಸಿಎಫ್ಐ, ಎಸ್ಡಿಪಿಐ ಮೊದಲಾದ ಸಂಘಟನೆಗಳು ರಾಜ್ಯವನ್ನು ತಾಲೀಬಾನ್ ಮಾಡಲು ಹೊರಟಿವೆ. ಯಾವುದಕ್ಕೂ ತಾಳ್ಮೆ ಇಲ್ಲದಂತೆ ಹಿಂದೂ ಕಾರ್ಯರ್ತರನ್ನು ಕೊಲೆ ಮಾಡುತ್ತಿರುವುದು ಖಂಡನೀಯ. ಹರ್ಷ ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಕಾಯಂ ಆಗುವಂತೆ ನೋಡಿಕೊಳ್ಳುವಂತೆ ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷ ಜೆ.ಆರ್. ವಾಸುದೇವ ಆಗ್ರಹಿಸಿದರು.
ರಾಜ್ಯದಲ್ಲಿ ಇದುವರೆಗೂ 20 ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಅಮಾನುಷವಾಗಿ ಕೊಲೆ ಮಾಡಲಾಗಿದೆ. ಇದು ಹಿಂದು ಸಮಾಜಕ್ಕೆ ಎಚ್ಚರಿಕೆಯ ಗಂಟೆಯೂ ಆಗಿದೆ. ಹಿಂದು ಸಂಘಟನೆ ಮಾಡಬಾರದು, ಗೋ ಸಂರಕ್ಷಣೆ, ಲವ್ ಜಿಹಾದ್ ನಂತಹ ಕೃತ್ಯಗಳನ್ನು ವಿರೋಧಿಸಬಾರದೆಂದು ಹೆದರಿಸುವ ಸಲುವಾಗಿ ಕೊಲೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆರ್ಎಸ್ಎಸ್ ವಿಭಾಗ ಪ್ರಚಾರ ಪ್ರಮುಖ್ ಮಧುಕರ್ ಮಾತನಾಡಿ, ಹಿಂದು ಕಾರ್ಯಕರ್ತರ ಹತ್ಯೆ ಮಾಡುವ ಮೂಲಕ ಹಿಂದುಗಳ ಸಹನೆ ಪರೀಕ್ಷೆ ಮಾಡಲಾಗುತ್ತಿದೆ.
ಶಾಂತಿ ಹಾಗೂ ಸಹನೆಯ ಕಟ್ಟೆ ಒಡೆದರೆ ಅದರಿಂದ ಉಂಟಾಗುವ ಪರಿಣಾಮವನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದರು. ಧರ್ಮ ಮತ್ತು ಶಾಂತಿ ಕಾಪಾಡುವ ಸಲುವಾಗಿ ಹಲ್ಲೆ ಸಹಿಸಿಕೊಳ್ಳುವುದು ದೌರ್ಬಲ್ಯವೆಂದು ಭಾವಿಸಿದರೆ ಸದು ನಿಮ್ಮ ತಪ್ಪು ಕಲ್ಪನೆ. ಕಿಡಿಗೇಡಿಗಳ ಕೃತ್ಯ ಹಿಂದು ಸಮಾಜಕ್ಕೆ ನಿರಂತರವಾಗಿ ಎಚ್ಚರಿಕೆಯ ಗಂಟೆಯಾಗುತ್ತಿದೆ. ಸ್ವಪ್ನಾವಸ್ಥೆಯಲ್ಲಿದ್ದ ಹಿಂದು ಸಮಾಜ ಎಚ್ಚರವಾಗಿದೆ. ದೇಶ ಹಾಗೂ ಧರ್ಮ ವಿರೋಧಿಕೃತ್ಯ ನಡೆಸುವವರಿಗೆ ಬೆಂಬಲ ನೀಡುವ ರಾಜಕಾರಣಿಗಳ ಆಟವೂ ಇನ್ನು ಮುಂದೆ ನಡೆಯುವುದಿಲ್ಲ ಎಂದರು.