ಶಿವಮೊಗ್ಗ: ಶಿವಮೊಗ್ಗದ ಮಾಚೇನಹಳ್ಳಿ ಡೈರಿಯ ಬಳಿ ಬೆಳ್ಳಂಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ.
ನಿಯಂತ್ರಣ ತಪ್ಪಿದ ಲಾರಿಯು ಕಾರಿಗೆ ಗುದ್ದಿದ ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದೆ.ಘಟನೆಯಲ್ಲಿ ಭದ್ರಾವತಿ ನಗರದ ಪೇಪರ್ ಟೌನ್ ನಿವಾಸಿಗಳಾಗಿರುವ ಷಣ್ಮುಖ ಹಾಗೂ ರಾಮಚಂದ್ರ ಮೃತಪಟ್ಟಿದ್ದಾರೆ.
ಷಣ್ಮುಖ ಹಾಗೂ ರಾಮಚಂದ್ರ ಅವರು ಕೆಲಸದ ನಿಮಿತ್ತ ತೀರ್ಥಹಳ್ಳಿಗೆ ಹೋಗುತ್ತಿದ್ದರು. ಈ ವೇಳೆ ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ಸಾಗುತ್ತಿದ್ದ ಲಾರಿಯ ಸ್ಟೇಯರಿಂಗ್ ತುಂಡಾಗಿ ಅಪಘಾತ ನಡೆದಿದೆ ಎನ್ನಲಾಗಿದೆ. ಡಿವೈಡರ್ ದಾಟಿ ಬಂದ ಲಾರಿ ಕಾರ್ ಗೆ ಢಿಕ್ಕಿ ಹೊಡೆದಿದೆ.ಭದ್ರಾವತಿಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.