ಬಂಟ್ವಾಳ: ದ್ವೇಷವನ್ನು ದೂರವಿಟ್ಟು, ಪ್ರತಿಯೊಬ್ಬರೂ ರಾಷ್ಟ್ರೀಯ ಚಿಂತನೆಯನ್ನು ಮೈಗೂಡಿಸಿಕೊಂಡಾಗ ದೇಶದ ಅಭಿವೃದ್ಧಿ ಸಾಧ್ಯವಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ಬಿ.ಸಿ.ರೋಡಿನ ಮಿನಿವಿಧಾನ ಸೌಧದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಾತಂತ್ರ್ಯ ಗಳಿಸಿದ ಬಗ್ಗೆ ಮಾತನಾಡುವ ನಾವು, ಸ್ವಾತಂತ್ರ್ಯ ಕಳೆದುಕೊಳ್ಳುವುದಕ್ಕೆ ಏನು ಕಾರಣ ಎಂಬ ಬಗ್ಗೆಯೂ ಅರಿವು ಬೆಳೆಸಿಕೊಳ್ಳಬೇಕಿದೆ ಎಂದವರು ಅಭಿಪ್ರಾಯ ಪಟ್ಟರು.
ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್. ಆರ್ ಧ್ವಜಾರೋಹಣ ನೇರವೇರಿಸಿ, ಗಣರಾಜ್ಯೋತ್ಸವದ ಸಂದೇಶ ನೀಡಿದರು. ಪರಕೀಯರ ದಾಳಿಯಿಂದ ಚದುರಿಹೋಗಿದ್ದ ಭಾರತೀಯರ ನಡುವೆ ಏಕತೆಯನ್ನು ಸೃಷ್ಟಿಸುವ ದೊಡ್ಡ ಸವಾಲು ಸಂವಿಧಾನ ರಚನೆಗಾರರಿಗಿತ್ತು. ಅದನ್ನು ಡಾ.ಬಿ.ಆರ್ ಅಂಬೇಡ್ಕರ್ ನೇತೃತ್ವದ ಸಮಿತಿ ಸಾಕಾರಗೊಳಿಸಿದೆ ಎಂದವರು ಹೇಳಿದರು.ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಬಂಟ್ವಾಳದ ಅಮೈ ಮಹಾಲಿಂಗ ನಾಯ್ಕ ರವರಿಗೆ ತಾಲೂಕು ಆಡಳಿತದ ಪರವಾಗಿ ಅವರು ಅಭಿನಂದನೆ ಸಲ್ಲಿಸಿದರು.
ಉಪನ್ಯಾಸ ನೀಡಿದ ಶಿಕ್ಷಕ ವಿಠಲ್ ನಾಯಕ್ ಮಾತನಾಡಿ, ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸ ಪ್ರತಿಯೊಬ್ಬರ ನಡೆನುಡಿಯಲ್ಲಿ ಆಗಬೇಕು. ಅದಕ್ಕಾಗಿ ಹೃದಯಾಂತರಾಳದಲ್ಲಿಯೇ ದೃಡನಿರ್ಧಾರ ಆಗಬೇಕು ಎಂದರು.
ಬಂಟ್ವಾಳ ಎಎಸ್ಪಿ ಪ್ರತಾಪ್ ತೋರಟ್ ವೇದಿಕೆಯಲ್ಲಿದ್ದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.