ಶಿವಮೊಗ್ಗ : ಕಳೆದ ಬಾರಿ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋತಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಬಡ್ಡಿ ಸಮೇತ ಸೇರಿಸಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಸಚಿವ ಕೆ.ಎಸ್. ಈಶ್ವರಪ್ಪ ಕರೆ ನೀಡಿದರು.
ಬಿಜೆಪಿ ವತಿಯಿಂದ ನಗರದ ಫ್ರೀಡಂ ಪಾರ್ಕ್ನಲ್ಲಿ ಗುರುವಾರ ಆಯೋಜಿಸಿದ್ದ ಜನ ಸ್ವರಾಜ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕಳೆದ ಬಾರಿ ಇಡೀ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾಗಿ ಯಡಿಯೂರಪ್ಪನವರು ಮಾತ್ರ ಇದ್ದರು. ಈ ಬಾರಿ 9 ಶಾಸಕರು, ಇಬ್ಬರು ಸಂಸದರು ಇದ್ದಾರೆ. ನೆಂಚಿಕೊಳ್ಳಲು ಮಾತ್ರ ಭದ್ರಾವತಿಯಲ್ಲಿ ಒಬ್ಬ ಕಾಂಗ್ರೆಸ್ ಶಾಸಕರಿದ್ದಾರೆ ಎಂದರು.
70 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಇಡೀ ದೇಶದಲ್ಲಿ 3 ಕೋಟಿ ಮನೆಗಳಿಗೆ ಕುಡಿಯುವ ನೀರು ಕೊಟ್ಟಿತ್ತು. ಈಗ 7 ವರ್ಷಗಳಲ್ಲಿ ಬಿಜೆಪಿ 8 ಕೋಟಿ ಮನೆಗಳಿಗೆ ಕುಡಿಯುವ ನೀರು ಕೊಟ್ಟಿದೆ. 2024 ರೊಳಗೆ ಪ್ರತೀ ಮನೆಗಳಿಗೆ ಕುಡಿಯುವ ನೀರು ಕೊಡಲು ಮೋದಿ ಯೋಜನೆ ರೂಪಿಸಿದ್ದಾರೆ ಎಂದರು.
ನರೇಗಾ ಯೋಜನೆ ಅನುಷ್ಠಾನದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಈ ಯೋಜನೆಯಲ್ಲಿ ಮಾನವ ದಿನಗಳನ್ನು 150 ಕ್ಕೆ ಹೆಚ್ಚಳ ಮಾಡಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆದೇಶಿಸಿದ್ದಾರೆ. ಇದು ಕರ್ನಾಟಕಕ್ಕೆ ಮಾತ್ರ ಆಗಿರುವ ಆದೇಶವಾಗಿದೆ. 1000 ಕೋಟಿ ನರೇಗಾ ಬಾಕಿ ಬಿಡುಗಡೆ ಮಾಡಿದ್ದಾರೆ ಎಂದರು.
ರೈತರಿಗೆ ಸಾಲ ನೀಡಿ ಸುಧಾರಣೆ ಮಾಡಬೇಕಾದ ಡಿಸಿಸಿ ಬ್ಯಾಂಕ್ನ ಈ ಹಿಂದಿನ ಅಧ್ಯಕ್ಷರು ಡಿಸಿಸಿ ಬ್ಯಾಂಕ್ನ ಬಂಗಾರವನ್ನು ಕಬ್ಬಿಣ ಮಾಡಿದ್ದರು. ಅಂಥವರನ್ನು ಜೈಲಿಗೆ ಕಳಿಸುವ ನಿಟ್ಟಿನಲ್ಲಿ ಸಹಕಾರಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದ ಅವರು, ಕಾಂಗ್ರೆಸ್ ಅವಧಿಯಲ್ಲಿ ಉದ್ಯೋಗ ಖಾತ್ರಿ ಹಣ 6 ತಿಂಗಳಿಗೆ ಬರುತಿತ್ತು. ಆದರೆ ಈಗ ಮುಂಗಡವಾಗಿ ಕೇಂದ್ರ ನೀಡುತ್ತಿದೆ ಎಂದರು