ಶಿವಮೊಗ್ಗ : ಸಮಿತಿ-ಸಂಘಟನೆ ಸಭೆಯಲ್ಲಿ ಜೈ ಶ್ರೀರಾಮ್- ಜೈಮಾರಮ್ಮ ಘೋಷಣೆ ! ಅಂತಿಮವಾಗಿ ಏನಾಯ್ತು ಇಲ್ಲಿದೆ ಡಿಟೇಲ್ಸ್. ಶಿವಮೊಗ್ಗದ ಕೋಟೆ ಮಾರಿಕಾಂಬ ಜಾತ್ರೆಯ ಅಂಗವಾಗಿ ಗದ್ದುಗೆ ಸಮೀಪ ಸ್ಟಾಲ್ಗಳನ್ನು ಹಾಕಲು, ಗುತ್ತಿಗೆ ನೀಡಲಾಗುತ್ತೆ.
ಒಟ್ಟಾರೆ ಗುತ್ತಿಗೆ ಪಡೆಯುವವ ಸ್ಟಾಲ್ಗಳನ್ನ ವಿತರಿಸುತ್ತಾನೆ. ಈ ಸಲ ಜಾತ್ರೆಯಲ್ಲಿ ಸ್ಟಾಲ್ಗಳನ್ನು ಹಿಂದೂಗಳಿಗಷ್ಟೆ ನೀಡಲೇಬೇಕು ಎಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿದ್ದವು.
ಈ ನಡುವೆ, ಹಿಂದೂ ಸಂಘಟನೆಗಳ ಒತ್ತಾಯದ ಬೆನ್ನಲ್ಲೆ ಸ್ಟಾಲ್ಗಳನ್ನುಗುತ್ತಿಗೆ ಹಿಡಿದಿದ್ದ ವ್ಯಕ್ತಿ ಚಿನ್ನಪ್ಪ ಎಂಬವರು, ತಾನು ಇಲ್ಲಿ ಭಿನ್ನಾಭಿಪ್ರಾಯಗಳ ನಡುವೆ ಗುತ್ತಿಗೆ ಹಿಡಿಯಲು ಸಾಧ್ಯವಿಲ್ಲ ಎಂದು ಟೆಂಡರ್ನಿಂದ ಹಿಂದಕ್ಕೆ ಸರಿದಿದ್ದರು.
ಈ ಹಿನ್ನೆಲೆಯಲ್ಲಿ ಇವತ್ತು ಹಿಂದೂಪರ ಸಂಘಟನೆಗಳ ಜೊತೆಗೆ ಮಾರಿಕಾಂಬಾ ಸೇವಾ ಸಮಿತಿ ಸದಸ್ಯರು ಸಭೆ ನಡೆಸಿದ್ರು.
ಈ ಸಭೆಯಲ್ಲಿ ಮಾರಿಕಾಂಬಾ ಜಾತ್ರೆ ಭಾವೈಕತ್ಯೆ ಉತ್ಸವವಾಗಿದ್ದು, ಈಗ ಅವರಿಗೆ ಕೊಡಬೇಡಿ, ಇವರಿಗೆ ಕೊಡಬೇಡಿ ಎಂದರೆ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯ್ತು.
ಇದಕ್ಕೆ ಪ್ರತಿಯಾಗಿ ಹಿಂದೂ ಸಂಘಟನೆಗಳು, ಜಾತ್ರೆಯಲ್ಲಿ ಸ್ಟಾಲ್ಗಳು ಇರಬೇಕು, ಹಿಂದೂಗಳಿಂದಲೇ ನಡೆಯಬೇಕು, ಹಿಂದೂಗಳನ್ನು ಹೊರತುಪಡಿಸಿ ಬೇರೆಯವರಿಗೆ ಅವಕಾಶ ನೀಡಿದರೇ, ಇವತ್ತಿನ ವಾತಾವರಣದಲ್ಲಿ ಹಿಂದೂಗಳಿಗೆ ಅಪಮಾನವಾಗಲಿದೆ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸಿದವು.
ಹಿಂದೂ ಪರ ಮುಖಂಡ ಧಿನ್ ದಯಾಳ್, ಅರ್ಧದಷ್ಟು ಸ್ಟಾಲ್ಗಳನ್ನ ಹಿಡಿಯಲು ಸಿದ್ಧ ಎಂದರೆ, ಬಿಜೆಪಿಯ ಚೆನ್ನಬಸಪ್ಪ ಮಾರಿಹಬ್ಬಕ್ಕೆ ಹಣದ ಕೊರತೆಯಾದರೆ ಹಿಂದೂ ಸಮಾಜ ಹಣ ಸಂಗ್ರಹಿಸಿ ನೀಡುತ್ತಿದ್ದೇವೆ ಎಂದರು.
ಇದಕ್ಕೆ ಮಾರಿಕಾಂಬಾ ಸೇವಾ ಸಮಿತಿ ಆಕ್ಷೇಪಿಸಿದ್ದಷ್ಟೆ ಅಲ್ಲದೆ ಹರಾಜಿನಿಂದಲೇ ಹಣ ಸಂಗ್ರಹವಾಗಬೇಕು, ಸಂಗ್ರಹಿಸುವ ಹಣ ಜಾತ್ರೆಗೆ ಬೇಡ ಎಂದಿತು. ಅಲ್ಲದೆ 9 ಲಕ್ಷದ ಮೇಲೆ ಸಾವಿರದೊಂದು ರೂಪಾಯಿಯನ್ನು ಯಾರೇ ಕಟ್ಟಿದರೂ ಟೆಂಡರ್ ಬಿಟ್ಟುಕೊಡಲಾಗುವುದು ಎಂದು ಸಮಿತಿ ಸದಸ್ಯರು ತಿಳಿಸಿದ್ರು. ಇದರ ಬೆನ್ನಲ್ಲೆ ಹಿಂದೂ ಸಂಘಟನೆಗಳು ಟೆಂಡರ್ ಮೊತ್ತವನ್ನು ಕೊಡುವುದಾಗಿ ಘೋಷಿಸಿದವು.
ಹೀಗೆ ವಿಚಾರ ತಾರ್ಕಿಕನ ಘಟ್ಟ ತಲುಪುತ್ತಲೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜೈಶ್ರೀರಾಮ್ ಘೋಷಣೆ ಕೂಗಿದ್ರು. ಈ ವೇಳೆ ಮಾರಿಕಾಂಬ ಸಮಿತಿ ಅಧ್ಯಕ್ಷ ಮರಿಯಪ್ಪರವರು ಜೈಮಾರಮ್ಮ ಎಂದು ಘೋಷಣೆ ಕೂಗಿದರು, ಯಾವಾಗ ಜೈ ಮಾರಮ್ಮ ಎಂಬ ಘೋಷಣೆ ಹೊರಬೀಳುತ್ತಲೇ ಎಲ್ಲರೂ ಜೈ ಮಾರಮ್ಮ, ಯಲ್ಲಮ್ಮ ಉದೋ ಉದೋ ಎಂಬ ಘೋಷಣೆಗಳನ್ನು ಕೂಗಲಾಯ್ತು.