ತೀರ್ಥಹಳ್ಳಿ : ನಕ್ಸಲ್ ಚಟುವಟಿಕೆಯ ಮುಂಚೂಣಿ ನಾಯಕಿ, ದಶಕದ ಹಿಂದೆಯೇ ಸತ್ತು ಹೋಗಿದ್ದಾಳೆ ಎಂದು ಪೊಲೀಸ್ ಇಲಾಖೆ ಭಾವಿಸಿದ್ದ ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ತಮಿಳುನಾಡಿನ ತಿರಪ್ಪತ್ತೂರು ಪೊಲೀಸ್ ಠಾಣೆಯಲ್ಲಿ ಶನಿವಾರ ಶರಣಾಗಿದ್ದಾಳೆ. ಈ ಮೂಲಕ ನಕ್ಸಲ್ ಚಟುವಟಿಕೆಯ ಒಂದು ಅಧ್ಯಾಯ ಮುಗಿದಂತಾಗಿದೆ.
ಕೇರಳದಲ್ಲಿ ಇತ್ತೀಚೆಗಷ್ಟೇ ಬಂಧನಕ್ಕೊಳಗಾದ ಬಿ.ಜಿ.ಕೃಷ್ಣಮೂರ್ತಿ ಪತ್ನಿಯಾಗಿದ್ದ ಹೊಸಗದ್ದ ಪ್ರಭಾ 2010 ಆಗಸ್ಟ್ 19ರಂದು ಮೃತಪಟ್ಟಿದ್ದಾಳೆ ಎಂದು ಹೇಳಲಾಗಿತ್ತು. ಆದರೆ, ಆಕೆಯ ಸಾವಿನ ಬಗ್ಗೆ ಯಾವುದೇ ಖಚಿತತೆ ಇರಲಿಲ್ಲ. ಈಗ ತಮಿಳುನಾಡು ಪೊಲೀಸರ ಮುಂದೆ ಶರಣಾಗುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆಬಿದ್ದಿದೆ.
ಬಿ.ಜಿ.ಕೃಷ್ಣಮೂರ್ತಿ ಶರಣಾಗತಿ, ಪಾರ್ಶ್ವ ವಾಯು ಪೀಡಿತರಾಗಿರುವ ಪ್ರಭಾ ಬಲಗೈ ಸ್ವಾಧೀನವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾಳೆ. ಇದರಿಂದ ಬೇಸತ್ತು ಪೊಲೀಸರ ಮುಂದೆ ಶರಣಾಗುವ ನಿರ್ಧಾರಕ್ಕೆ ಬಂದಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಸಂಘಟನೆ ಹಿನ್ನಡೆ: ಮಲೆನಾಡಿನಲ್ಲಿ ಸಾಕೇತ್ ರಾಜನ್ ಎನ್ಕೌಂಟರ್ಗೆ ಬಲಿಯಾದ ನಂತರ ನಕ್ಸಲ್ ನಿಗ್ರಹದಳ, ಪೊಲೀಸ್ ಕಾರಾಚರಣೆ ತೀವ್ರಗೊಂಡಿತ್ತು. ಹಲವು ನಕ್ಸಲರು ಎನ್ ಕೌಂಟಗೆ ಬಲಿಯಾಗಿದ್ದು, ಎಎನ್ಎಫ್ ಪ್ರಹಾರದಿಂದ ತಪ್ಪಿಸಿಕೊಳ್ಳಲು ಬಿ.ಜಿ.ಕೃಷ್ಣಮೂರ್ತಿ, ಹೊಸಗದ್ದೆ ಪ್ರಭಾ ಸೇರಿದಂತೆ ಪ್ರಮುಖ ನಕ್ಸಲರು ಕೇರಳದತ್ತ ತೆರಳಿ ಭೂಗತರಾಗಿದ್ದರು. ಕೇರಳ ಪೊಲೀಸರು ಇತ್ತೀಚಿಗೆ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿಯನ್ನು ಬಂಧಿಸಿದ್ದರು. ಎರಡು ದಶಕದಿಂದ ಮಲೆನಾಡನ್ನು ತಲ್ಲಣಗೊಳಿಸಿದ್ದ ನಕ್ಸಲ್ ಚಟುವಟಿಕೆ ಬಹುತೇಕ ಅಂತ್ಯಗೊಂಡಿದೆ.
2010ರಲ್ಲಿ ಪ್ರಭಾ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆ ಶಂಕೆ ವ್ಯಕ್ತಪಡಿಸಿತ್ತು. ಪಶ್ಚಿಮಘಟ್ಟದ ದಟ್ಟ ಕಾಡಿನಲ್ಲಿ ಆಕೆಯ ಅಂತ್ಯಸಂಸ್ಕಾರ ಮಾಡಲಾಗಿದೆ ಎಂಬ ವದಂತಿ ಹರಡಿತ್ತು. ಕುಟುಂಬದವರು 11ನೇ ದಿನದ ತಿಥಿ ಕಾರ್ಯ ಕೂಡ ಮುಗಿಸಿದ್ದರು. ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿ ಹೊಸಗದ್ದೆಯ ಈಕೆ ನಾರಾಯಣ ಶೆಟ್ಟಿ ಎಂಬುವರ ಮಗಳು, ಪ್ರಭಾ, ಸಂಧ್ಯಾ, ವಿಂದು, ನೇತ್ರಾ, ಮಧು ಎಂಬ ಹೆಸರುಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದು, ಕನ್ನಡ, ತುಳು ಬಲ್ಲವಳಾಗಿದ್ದಾಳೆ. ಹೊಸಗದ್ದೆಯಲ್ಲಿ 7ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು, ಆಗುಂಬೆಯ ಎಸ್ವಿಎಸ್ ಪ್ರೌಢಶಾಲೆ, ನಂತರ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದಳು. ಪ್ರಗತಿಪರ ಹೋರಾಟಗಳಲ್ಲಿ ಸಕ್ರಿಯವಾಗಿದ್ದು, ಕರ್ನಾಟಕ ವಿಮೋಚನಾ ರಂಗ, ಮಹಿಳಾ ಜಾಗೃತಿ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಳು. ಇಲ್ಲಿಂದಲೇ ಭೂಗತರಾಗಿ ಪಶ್ಚಿಮಘಟ್ಟ ಮತ್ತು ಕರಾವಳಿ ಸರಹದ್ದಿನಲ್ಲಿ ನಕ್ಸಲ್ ಚಟುವಟಿಕೆ ವಿಸ್ತರಿಸುವ ಮುಂಚೂಣಿಯಲ್ಲಿದ್ದಳು. ನಕ್ಸಲ್ ನಾಯಕನಾಗಿದ್ದ ಬಿ.ಜಿ.ಕೃಷ್ಣಮೂರ್ತಿಯನ್ನು ವಿವಾಹವಾಗಿದ್ದ ಪ್ರಭಾ ಅಸ್ತಮಾದಿಂದ ಬಳಲುತ್ತಿದ್ದಳು. ಈಕೆಯ ವಿರುದ್ಧ ಜಿಲ್ಲೆಯ ನಾನಾ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ. ಪ್ರಭಾಳ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷರೂ, ಬಹುಮಾನವನ್ನು ಪೊಲೀಸ್ ಇಲಾಖೆ ಘೋಷಣೆ ಮಾಡಿತ್ತು. ಇದೀಗ ಪ್ರಭಾ ಶರಣಾಗಿದ್ದು ಎಲ್ಲಾ ಗೊಂದಲಕ್ಕೆ ತೆರೆ ಬಿದ್ದಿದೆ.