ರಿಪ್ಪನ್ಪೇಟೆ : ‘ರಾಜ್ಯ ಸರ್ಕಾರದಲ್ಲಿ ಗೃಹ ಸಚಿವನಾಗಿ ಅಧಿಕಾರ ಪಡೆದ ಮೇಲೆ ಭ್ರಷ್ಟಾಚಾರಿಗಳಿಗೆ ಎಂದಿಗೂ ಮಣೆ ಹಾಕಿಲ್ಲ. ಹುಬ್ಬಳ್ಳಿಯಲ್ಲಿ ಕೋಮು ಗಲಭೆ ಹುಟ್ಟು ಹಾಕಲು ಯತ್ನಿಸಿದವರನ್ನು ಯಾವುದೇ ಮುಲಾಜಿಗೆ ಒಳಗಾಗದೆ ಬಂಧಿಸಿದ್ದೇವೆ. ದೇಶದ ಏಕತೆಗೆ ಭಂಗ ತರುವವರನ್ನು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ಗೆ ಆರ್.ಎಂ. ಮಂಜುನಾಥ ಗೌಡ ಅವರ ಲಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಮುಳುವಾಗಿದೆ. ಸ್ವ ಕ್ಷೇತ್ರದಲ್ಲಿ ತನ್ನ ಅಸ್ತಿತ್ವದ ಉಳಿವಿಗಾಗಿ ಕಿಮ್ಮನೆ ಗೃಹ ಇಲಾಖೆ ಕಾರ್ಯವೈಖರಿಯನ್ನು ಮನ ಬಂದಂತೆ ಟೀಕಿಸುತ್ತಿದ್ದಾರೆ. ಇದು ಪ್ರಬುದ್ಧ ರಾಜಕಾರಣಿಗೆ ಶೋಭೆ ತರಲ್ಲ. ಸಕಾರಾತ್ಮಕ ಟೀಕೆಗೆ ಸ್ವಾಗತ. ವೈಯಕ್ತಿಕ ಟೀಕೆ ಸಲ್ಲ, ಅಂತಹುಗಳಿಗೆ ಸ್ಪಂದಿಸುವುದಿಲ್ಲ’ ಎಂದರು.
‘ಪಿಎಸ್ಐ ನೇಮಕಾತಿ ಅಕ್ರಮ ಕುರಿತು ಮಾಹಿತಿ ದೊರೆತ ತಕ್ಷಣವೇ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ, ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಯಾರ ರಕ್ಷಣೆಗೂ ನಿಂತಿಲ್ಲ. ಸ್ಥಳೀಯ ಶಾಸಕರ ಮನವಿ ಮೇರೆಗೆ ಪಕ್ಷದ ಕಾರ್ಯಕರ್ತರು ಎನ್ನುವ ಕಾರಣಕ್ಕೆ ಕಲಬುರಗಿ ಮಾರ್ಗದಲ್ಲಿ ಸಂಚರಿಸುವ ಸಂದರ್ಭದಲ್ಲಿ ದಿವ್ಯಾ ಹಾಗರಗಿ ಮನೆಯಲ್ಲಿ ಟೀ ಕುಡಿದು ಬಂದಿದ್ದೇನೆ. ಹಾಗಂತ ಅವರ ರಕ್ಷಣೆ ನಿಂತಿಲ್ಲ. ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವಧಿಯಲ್ಲೂ ಪ್ರಶ್ನೆ ಪತ್ರಿಕೆ ಹಗರಣವಾಗಿರಲಿಲ್ಲವೇ? ಅದು ಇವರ ವೈಫಲ್ಯ ಅಲ್ಲವೇ’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಡಾ. ರಾಜ್ಕುಮಾರ ಸಾವಿನ ಸಂದರ್ಭದಲ್ಲಿ ರಾಜ್ಯದಲ್ಲಿ 6 ಜನ ಮೃತಪಟ್ಟರು. ಪುನೀತ್ ರಾಜ್ಕುಮಾರ್ ಸಾವನ್ನಪ್ಪಿದ ಸಂದರ್ಭದಲ್ಲಿ 25 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಜಮಾಯಿಸಿದರೂ ಯಾವುದೇ ಗಲಾಟೆಗೆ ಆಸ್ಪದ ನೀಡಿಲ್ಲ. ರಾಜ್ಯ ಸರ್ಕಾರ ಸಮರ್ಥವಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸುತ್ತಿದೆ’ ಎಂದು ಸಮರ್ಥಿಸಿಕೊಂಡರು.
ದಿಂಗಾಲೇಶ್ವರ ಶ್ರೀಗಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸರ್ಕಾರದ ನೀತಿಯಲ್ಲಿ ಜಿಎಸ್ಟಿ ಹಣ ಕಡಿತವಾಗುವ ನಿಯಮವಿದೆ. ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಲಾಗುವ ಅನುದಾನಕ್ಕೆ ಜಿಎಸ್ಟಿ ಹಾಕದಂತೆ ಕಾನೂನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದರು.