ಉತ್ತರಕನ್ನಡ: ಮಂಗನ ಕಾಯಿಲೆ ಅಥವಾ ಕ್ಯಾಸನೂರು ಅರಣ್ಯ ರೋಗ ಕರ್ನಾಟಕದಲ್ಲಿ 2 ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಈ ರೋಗ ಹರಡುವುದನ್ನು ತಡೆಯಲು ತುರ್ತು ಕ್ರಮ ಮತ್ತು ತಡೆಗಟ್ಟುವ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ. ಕರ್ನಾಟಕ ಸರ್ಕಾರ ಕೂಡ ಮಂಗನ ಕಾಯಿಲೆಯನ್ನು ಗಂಭೀರವಾಗಿದ್ದು, ಪರಿಗಣಿಸಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಮಲೆನಾಡಿನ ಜನರಿಗೆ ಸೂಚನೆ ನೀಡಲಾಗಿದೆ.
ಪಶ್ಚಿಮಘಟ್ಟ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಮಂಗನ ಕಾಯಿಲೆ ಕಾಡಿನ ಆಸುಪಾಸಿನಲ್ಲಿ ವಾಸಿಸುವರಿಗೆ ಪ್ರಾಣಾಪಾಯ ತಂದೊಡ್ಡಿದೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯ ಹೊಸನಗರದ 18 ವರ್ಷದ ಬಾಲಕಿ ಮತ್ತು 79 ವರ್ಷದ ವ್ಯಕ್ತಿಯೊಬ್ಬರು ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ.
ಮಂಗನ ಕಾಯಿಲೆಯ ಲಕ್ಷಣಗಳು:
ಹಠಾತ್ ಜ್ವರ, ತಲೆನೋವು, ವಾಂತಿ, ಹೊಟ್ಟೆ ನೋವು, ಸ್ನಾಯು ನೋವು ಮತ್ತು ಬೆನ್ನುನೋವು, ಚಳಿ, ಸುಸ್ತು ಮತ್ತು ಅತಿಸಾರ ಇವು ಮಂಗನ ಕಾಯಿಲೆಯ ಆರಂಭಿಕ ಲಕ್ಷಣಗಳಾಗಿವೆ. ರಕ್ತಸ್ರಾವದ ರೋಗಲಕ್ಷಣಗಳೊಂದಿಗೆ ತೀವ್ರವಾಗುವ ಈ ರೋಗವು ಪ್ರಾಣಕ್ಕೇ ಆಪತ್ತು ಉಂಟುಮಾಡಬಹುದು. ಈ ರೋಗದ ಹರಡುವಿಕೆಯನ್ನು ತಡೆಗಟ್ಟಲು ವನ್ಯಜೀವಿಗಳಲ್ಲಿ ಅದರಲ್ಲೂ ವಿಶೇಷವಾಗಿ ಮಂಗಗಳಲ್ಲಿ ಹುಳಗಳು ಉಂಟಾಗದಂತೆ ನಿಯಂತ್ರಿಸುವುದು ಮುಖ್ಯವಾಗಿದೆ.
ಆರಂಭದಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳಿಗೆ ಸೀಮಿತವಾಗಿದ್ದ ಈ ರೋಗವು ಕಳೆದ 10 ವರ್ಷಗಳಿಂದೀಚೆಗೆ ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡಿನಂತಹ ಪಶ್ಚಿಮ ಘಟ್ಟಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಸದ್ಯಕ್ಕೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ 31 ಪ್ರಕರಣಗಳು ಪತ್ತೆಯಾಗಿದೆ.
ಮಂಗನ ಕಾಯಿಲೆ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಂಕ್ರಾಮಿಕ ರೋಗವಲ್ಲ. ಇದು ಸೋಂಕಿತ ಮಂಗನ ದೇಹದಲ್ಲಿರುವ ಸಣ್ಣ ಹುಳಗಳು ಮನುಷ್ಯರಿಗೆ ಕಚ್ಚಿದಾಗ ಮಾತ್ರ ಹರಡುವ ರೋಗವಾಗಿದೆ. ಸೋಂಕಿತ ಮಂಗಗಳೊಂದಿಗೆ ಸಂಪರ್ಕ ಹೊಂದುವುದರಿಂದ ಈ ರೋಗ ಹರಡುತ್ತದೆ. ಸುಮಾರು ಶೇ. 80ರಷ್ಟು ರೋಗಿಗಳು ಚೇತರಿಸಿಕೊಳ್ಳುತ್ತಾರೆ. ಆದರೆ, ಸುಮಾರು ಶೇ. 20ರಷ್ಟು ರೋಗಿಗಳು ತೀವ್ರ ರಕ್ತಸ್ರಾವ ಅಥವಾ ನರವೈಜ್ಞಾನಿಕ ಸಮಸ್ಯೆಗಳನ್ನು ಅನುಭವಿಸುತ್ತಾರೆ.
ಈ ರೋಗವು ಮುಂದುವರೆದಂತೆ ವಾಕರಿಕೆ, ವಾಂತಿ, ಹೊಟ್ಟೆ ನೋವು, ಅತಿಸಾರ, ಮೆನಿಂಜೈಟಿಸ್, ಮೂಗಿನಲ್ಲಿ ರಕ್ತಸ್ರಾವ ಮತ್ತು ಒಸಡುಗಳಲ್ಲಿ ರಕ್ತಸ್ರಾವದಂತಹ ಲಕ್ಷಣಗಳು ಉಲ್ಬಣಗೊಳ್ಳುತ್ತದೆ.