ಶೃಂಗೇರಿ: ಕಾಶ್ಮೀರದ ತಿತ್ವಾಲ್ನ ಶ್ರೀ ಶಾರದಾ ಪೀಠದ ದಕ್ಷಿಣಾ ಸಮಿತಿ ಸದಸ್ಯರು ಸಂಗ್ರಹಿಸಿದ ಅಯೋಧ್ಯೆಯಲ್ಲಿ ಸಮರ್ಪಿಸಲಿರುವ ಕಾಶ್ಮೀರದ ತ್ರಿವೇಣಿ ಸಂಗಮ ತಿತ್ವಾಪಾಣಿಯ ಗಂಗಾ, ಸರಸ್ವತಿ ಹಾಗೂ ಮಧುಮತಿ ನದಿಗಳ ಪವಿತ್ರ ಜಲಕುಂಭಕ್ಕೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಪೂಜೆ ಸಲ್ಲಿಸಿದರು.
ಸಮಿತಿ ಸದಸ್ಯರು ಮಂಗಳವಾರ ಬೆಳಗ್ಗೆ ಶ್ರೀ ಶಾರದಾ ಪೀಠದ ಗುರುಭವನದಲ್ಲಿ ಉಭಯ ಜಗದ್ಗುರುಗಳಾದ ಶ್ರೀಭಾರತೀ ತೀರ್ಥ ಮಹಾಸ್ವಾಮೀಜಿ ಹಾಗೂ ವಿಧುಶೇಖರ ಸ್ವಾಮೀಜಿಗಳ ಆಶೀರ್ವಾದ ಪಡೆದು ಕಾಶ್ಮೀರದ ತ್ರಿವಳಿ ನದಿಯಿಂದ ತಂದ ಜಲದ ಬಗ್ಗೆ ವಿವರಿಸಿದರು.
ಕಾಶ್ಮೀರ ಶ್ರೀಶಾರದಾ ಪೀಠದ ರಕ್ಷಣಾ ಸಮಿತಿಯ ಸದಸ್ಯರಾದ ರವೀಂದರ್ ಪಂಡಿತ್, ಮಣಿಶ್ರೀ ಗಣೇಶ್, ಪಿ.ಟಿ.ವೆಂಕಟರಮಣನ್ ಮತ್ತು ಮಂಜುನಾಥ್ ಶರ್ಮ ಇದ್ದರು.
ಈ ಸಂದರ್ಭ ಮಾತನಾಡಿದ ರವೀಂದರ್ ಪಂಡಿತ್, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿತ ಶ್ರೀ ಶಾರದಾ ಸರ್ವಜ್ಞ ಪೀಠವನ್ನು ಪಾಕ್ ಸೇನೆ ಅತಿಕ್ರಮಿಸಿದೆ. ಪೀಠದ ಒಂದು ಪಾರ್ಶ್ವ ಧ್ವಂಸ ಮಾಡಿದ್ದು, ಅಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸುವುದರ ಮೂಲಕ ಶ್ರದ್ಧಾಕೇಂದ್ರವನ್ನು ಪ್ರವಾಸಿ ತಾಣ ಮಾಡುವ ಹುನ್ನಾರ ಮಾಡಿದೆ. ಈ ವಿಚಾರವಾಗಿ ಉಭಯ ರಾಷ್ಟ್ರಮಟ್ಟದಲ್ಲಿ ಇದಕ್ಕೆ ತಡೆ ಹಿಡಿಯುವಂತೆ ಶೃಂಗೇರಿ ಜಗದ್ಗುರುಗಳಲ್ಲಿ ವಿನಂತಿ ಮಾಡಲಾಗಿದೆ ಎಂದರು.