ಶೃಂಗೇರಿ: ಬಾಹ್ಯಾಕಾಶ ತಂತ್ರಜ್ಞಾನವು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದ್ದು ನಮ್ಮ ಹಿರಿಮೆಯ ಮತ್ತು ಉನ್ನತಿಯ ಸಂಕೇತವಾಗಿದೆ ಎಂದು ಇಸ್ರೋ ವಿಜ್ಞಾನಿ, ಪದ್ಮಭೂಷಣ ಮತ್ತು ಪಧ್ಮಶ್ರೀ ಪುರಸ್ಕೃತ ಡಾ. ಬಿ ಎನ್. ಸುರೇಶ್ ಹೇಳಿದರು.
ಶೃಂಗೇರಿ ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ಸುಜನ ಟ್ರಸ್ಟ್ ಇವರು, ಶ್ರೀ ಭಾರತೀತೀರ್ಥ ಕಲ್ಚರಲ್ ಟ್ರಸ್ಟ್ ಮತ್ತು ತೆನೆಬಳಗದ ಸಹಯೋಗದೊಂದಿಗೆ ಆಯೊ ಜಿಸಿದ್ದ ಪ್ರದೀಪ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
೫೮ ಉಪಗ್ರಹಗಳು ವಿಶ್ವದ ವಿಸ್ಮಯಗಳನ್ನು ತೆರೆದಿಡುತ್ತಾ ಅಭಿವೃದ್ಧಿಗೆ ಪೂರಕ, ಮಾಹಿತಿ ತಂತ್ರಜ್ಞಾನಕ್ಕೆ ಗಣನೀಯ ಕೊಡಗೆ ನೀಡುತ್ತಿದೆ. ಪ್ರತೀ ಉಪಗ್ರಹ ಉಡಾವಣೆಯ ಸಂದರ್ಭದಲ್ಲೂ ವಿಜ್ಞಾನಿಗಳು ಯಶಸ್ಸಿಗಾಗಿ ದೇವರನ್ನು ಸ್ಮರಿಸುವ ಪರಿಪಾಠವಿದ್ದು ಆ ಸಂದರ್ಭದ ಪ್ರಾರ್ಥನೆ ಭಾರತದ ೧೪೦ ಕೋಟಿ ಜನರನ್ನು ತಲುಪಲಿರುವುದು ವಿಶೇಷವಾದ ಸಂಗತಿ. ಈ ಹಿನ್ನಲೆಯಲ್ಲಿ ವಿಜ್ಞಾನಿಗಳು ಅವಿರತವಾಗಿ ಸೇವೆಯನ್ನು ಸಲ್ಲಿಸುತ್ತಾ ದೇಶದ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ನನ್ನ ಈ ಸಾಧನೆಯ ಪಥ ಇಲ್ಲಿಯವರೆಗೂ ಕರೆತಂದಿದೆ ಎಂದು ಸುರೇಶ್ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುರೊಳ್ಳಿ ಸುಧೀರ್ ಕುಮಾರ್ ಮಲೆನಾಡು ಮೂಲದ ಪ್ರದೀಪ್ ಅವರು ಮೀನುಗಾರಿಕಾ ಸಂಶೋಧನಾ ವಿಭಾಗದಲ್ಲಿ ಎತ್ತರದ ಸಾಧನೆ ಮಾಡಿದ್ದು ದೇಶದ ಕೀರ್ತಿಯನ್ನು ಅಮೇರಿಕಾದಲ್ಲೂ ಪಸರಿಸಿ, ಸಾಂಸ್ಕೃತಿಕ ಅಭಿರುಚಿಯ ಮೂಲಕ ತನ್ನದೇ ಆದ ವಿಶೇಷತೆಯನ್ನು ಗಳಿಸಿ ಅಮೇರಿಕಾದ ಕನ್ನಡ ಕೂಟದಲ್ಲೂ ಸಕ್ರಯರಾಗಿದ್ದವರು. ಇಂತಹ ಪ್ರತಿಭಾವಂತ ವಿಜ್ಞಾನಿ ಅಕಾಲಿಕವಾಗಿ ನಮ್ಮನ್ನು ಅಗಲಿದ್ದು ಕಳೆದ ೫ ವರ್ಷಗಳಿಂದ ಅವರ ಹೆಸರಿನಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಆಧ್ಯಾತ್ಮ ಮತ್ತು ವಿಜ್ಞಾನ ಎಂಬ ವಿಚಾರದ ಕುರಿತು ಪ್ರಾದ್ಯಾಪಕ, ಲೇಖಕ ನರೇಂದ್ರ ರೈ ದೇರ್ಲ ವಿಶೇಷ ಉಪನ್ಯಾಸ ನೀಡಿ ಜೀವನದ ಕಷ್ಟ ನಿಷ್ಠುರ ಮತ್ತು ಅದರಾಚೆಯೆ ಸಂಯಮವು ಇರುವುದು ನೇಗಿಲ ಯೋಗಿಯಾದ ರೈತನಲ್ಲಿ ಮಾತ್ರ. ನಾವು ಆಧುನಿಕ ಜಗತ್ತಿನ ಪ್ರಹಾರಕ್ಕೆ ಸಿಕ್ಕಿ ಮೌಲ್ಯಯುತ ಕೃಷಿಗೆ ವಿಮುಖರಾಗಿ ವಾಣಿಜ್ಯಾತ್ಮಕ ದೃಷ್ಟಿಕೋನ ವನ್ನು ಹೊಂದುತ್ತಾ ಪರೋಕ್ಷವಾಗಿ ಭೂಮಿ, ಪರಿಸರವನ್ನು ನಾಶ ಮಾಡುವ ಹಂತಕ್ಕೆ ತಲುಪಿರುವುದು ದುರಂತ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಟಿ ಡಿ ರಾಜೇಗೌಡ ಸುಜನ ಟ್ರಸ್ಟ್ ತಮ್ಮ ಪುತ್ರಿಯ ಹೆಸರಿನಲ್ಲಿ ಸಾಮಾಜಿಕ ಸೇವಾ ಕಾರ್ಯಕ್ಕಾಗಿ ರಚಿಸಿದ್ದು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವು ಯೋಜನೆಗಳನ್ನು ಯಶಸ್ವಿಗೊಳಿಸಿ ಜನಸಾಮಾನ್ಯರ ಸಂಕಷ್ಟಕ್ಕೆ ನೆರವಾಗಿದ್ದೇವೆ. ಪ್ರದೀಪ್ ಅವರ ಹೆಸರಿನಲ್ಲಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಕೂಡ ಸೇವೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಸಮಾರಂಭದಲ್ಲಿ ತೋಟಗಾರಿಕೆ ಮತ್ತು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ವಾಸುದೇವಪ್ಪ ಮತ್ತು ನಿವೃತ್ತ ಹಿರಿಯ ಮೀನುಗಾರಿಕಾ ಸಂಶೋ ಧಕರಾದ ಡಾ. ಸೀನಪ್ಪ, ಪ್ರಾಂಶುಪಾಲ, ಡಾ. ಎಂ ಸ್ವಾಮಿ, ಪೂರ್ಣಿಮಾ ಪ್ರದೀಪ್ ಮತ್ತು ಆಯೋಜಕ ಚಿದಾನಂದ ಹೆಗ್ಗಾರ್ ಉಪಸ್ಥಿತರಿದ್ದರು. ಸಂಘಟಕ ರಮೇಶ್ ಬೇಗಾರ್ ನಿರೂಪಿಸಿದರು. ಸುಜನ ಟ್ರಸ್ಟ್ ಅಧ್ಯಕ್ಷ ಎಂ ಆರ್ ಸುರೇಶ್ ವಂದಿಸಿದರು.
ಗಮನ ಸೆಳೆದ ಗೀಗೀ ಪದ ಪ್ರದೀಪ ಪ್ರಶಸ್ತಿ ಪ್ರದಾನ ಸಮಾರಂಭ ಕ್ಕಾಗಿ ರೂಪಿಸಲಾಗಿದ್ದ ಶೀರ್ಷಿಕೆಯನ್ನೊಳ ಗೊಂಡ ಗೀಗೀ ಪದ ಪ್ರೇಕ್ಷಕರ ಗಮನ ಸೆಳೆಯಿತು. ಕಾರ್ಯಕ್ರಮದ ಉದ್ದೇಶ ಮತ್ತು ಸಾಧಕ ವಿಜ್ಞಾನಿ ಸುರೇಶ್ ಅವರ ಬಗೆಗಿನ ಪ್ರಶಂಸೆಯನ್ನೊಳಗೊಂಡ ಗೀಗೀ ಪದ ಶ್ರೀನಿಧಿ ಕೊಪ್ಪ ಅವರ ಸಂಗೀತದಲ್ಲಿ ಮೂಡಿ ಬಂದಿದ್ದು ಸನ್ಮಾನ ಸಂದರ್ಭ ಹಾಡಿನ ಲಯಕ್ಕೆ ಪ್ರೇಕ್ಷಕರ ಚಪ್ಪಾಳೆ ಮಿಳಿತಗೊಂಡು ಕಾರ್ಯಕ್ರಮದ ಆಕರ್ಷಣೆಯನ್ನು ಹೆಚ್ಚಿಸಿತು. ಸಮಾರಂಭದ ನಂತರ ಕುಂದಾಪುರದ ಮೂರು ಮುತ್ತು ಕಲಾವಿದರಿಂದ ಹಾಸ್ಯ ನಾಟಕ ಪ್ರದರ್ಶನಗೊಂಡಿತು.