ಚಿಕ್ಕಮಗಳೂರು: ನಮ್ಮ ಸಾಮರ್ಥ್ಯ ನಮ್ಮ ಮನೆಗಳಿಗೆ ಮಾತ್ರ ಸೀಮಿತ, ಅವರ ಸಾಮರ್ಥ್ಯ ಮನೆಯಿಂದ, ಊರಿನಿಂದ ದಾಟಿದ ಸಾಮರ್ಥ್ಯ. ಆ ರೀತಿ ಸಾಮರ್ಥ್ಯ ನಮಗೆ ಖಂಡಿತ ಇಲ್ಲ ಎನ್ನುವುದನ್ನ ಒಪ್ಪಿಕೊಳ್ಳುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.
ಬಿಜೆಪಿಗರು ನಪುಂಸಕರು ಎಂದು ಕುಮಾರಸ್ವಾಮಿ ಮಾಡಿದ್ದ ಟ್ವೀಟ್ಗೆ ಪ್ರತಿಕ್ರಿಯಿಸಿದ ರವಿ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಅವರನ್ನೇ ಕೇಳಬೇಕು. ಅವರು ವೈಯಕ್ತಿವಾಗಿ ಏನಾದರೂ ಹೇಳಿದ್ದರೆ ಖಂಡಿತವಾಗಿ ನಾವು ಅವರಷ್ಟು ಸಾಮರ್ಥ್ಯ ಇರುವವರಲ್ಲ ಎಂದು ಹಿಂದೆಯೇ ಒಪ್ಪಿಕೊಂಡಿದ್ದೇವೆ ಎಂದರು.
ರಾಜಕೀಯವಾಗಿ ಅವರು ಹೇಳಿದ್ದರೆ, ಬಿಜೆಪಿ ರಾಜಕೀಯವಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತಲೇ ಬಂದಿದೆ. ಮಂಡ್ಯ ದಂತಹ ಜೆಡಿಎಸ್ ಭದ್ರಕೋಟೆಯಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೇ ಅವರ ಪುತ್ರನನ್ನು ನೂರಾರು ಕೋಟಿ ಖರ್ಚು ಮಾಡಿದರೂ ಗೆಲ್ಲಿಸಲು ಆಗಲಿಲ್ಲ. ಇದಕ್ಕೆ ಅವರೇನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ರಾಜಕೀಯ ದೃಷ್ಠಿಯಿಂದ ನಪುಂಸಕ ಎಂದು ಹೇಳಿದ್ದರೆ, ದೇವೇಗೌಡರು ಅತ್ಯಂತ ಹಿರಿಯ ನಾಯಕರು. ಪ್ರಧಾನಮಂತ್ರಿ ಸ್ಥಾನಕ್ಕೇರಿದವರು, ಅವರ ಬಗ್ಗೆ ನಮಗೆ ಗೌರವವಿದೆ. ಅವರನ್ನ ಇಳಿ ವಯಸ್ಸಿನಲ್ಲಿ ತುಮಕೂರಿನಲ್ಲಿ ನಿಲ್ಲಿಸಿ ಗೆಲ್ಲಿಸಿಕೊಳ್ಳಲಾಗಲಿಲ್ಲ. ಈ ಬಗ್ಗೆ ಇನ್ನೇನು ಹೇಳಬೇಕು ಎಂದರು.
ವೈಯಕ್ತಿಕ ದೃಷ್ಠಿಯಿಂದ ಹೇಳಿದ್ದರೆ ನಮ್ಮದೇನಿದ್ದರೂ ಸೀಮಿತ ಚೌಕಟ್ಟಿನೊಳಗಿನ ಸಾಮರ್ಥ್ಯ, ಅವರಷ್ಟು ಸಾಮರ್ಥ್ಯ ನಮಗಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದೇವೆ. ರಾಜಕೀಯ ಚೌಕಟ್ಟಿನಲ್ಲಿ ಹೇಳಿದ್ದರೆ ಬಿಜೆಪಿ ೨೬ ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಸ್ಥಾನವನ್ನು ತೋರಿಸಿ ಕೊಟ್ಟಿದೆ ಎಂದು ತಿಳಿಸಿದರು.
ನಮ್ಮ ಪಕ್ಷದಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತನಿಗೂ ಮುಖ್ಯಮಂತ್ರಿ ಆಗುವ ಅವಕಾಶವನ್ನು ಅವರ ಸಾಮರ್ಥ್ಯ, ಪರಿಶ್ರಮಕ್ಕನುಗುಣವಾಗಿ ಒದಗಿಸಿಕೊಡಲಾಗುತ್ತದೆ. ಅದೇ ಸ್ಥಿತಿ ಜನತಾದಳದಲ್ಲಿದೆಯಾ? ಎಂದು ರವಿ ಪ್ರಶ್ನಿಸಿದರು. ಪ್ರಹ್ಲಾದ್ ಜೋಷಿ ಅವರನ್ನು ಬಿಜೆಪಿ ಸಿಎಂ ಮಾಡಲು ಹೊರಟಿದೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದ ಅವರು, ಸಾಮಾನ್ಯ ಕಾರ್ಯಕರ್ತರಿಗೆ ದೊಡ್ಡ ಹುದ್ದೆ ನೀಡುವ ಅವಕಾಶ ಅವರ ಪಕ್ಷದಲ್ಲಿಇದೆಯೇ? ಹಾಸನದಲ್ಲಿ ಅವರ ಒಳಜಗಳ ನೋಡಿದ್ದೀರಿ. ಅವರ ದೃಷ್ಟಿಯಲ್ಲಿ ಸಾಮಾನ್ಯ ಕಾರ್ಯಕರ್ತರು ಅಂದರೆ ಭವಾನಿ ಅಕ್ಕ, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಅಷ್ಟೇ ಎಂದು ಟೀಕಿಸಿದರು.
ನಾನು ಪೋಸ್ಟರ್ ಹೊಡೆದು, ಬಾವುಟ ಕಟ್ಟಿ ಇಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದೇನೆ. ನಾವೇನೂ ದೊಡ್ಡ ರಾಜಕೀಯ ಹಿನ್ನೆಲೆಯವರಲ್ಲ. ಹಾಗೆಯೇ ಪ್ರಹ್ಲಾ ದ್ ಜೋಷಿ ಅವರೂ ಸಹ ಸಮಾನ್ಯ ಕಾರ್ಯರ್ತರೇ, ನಮ್ಮ ಪ್ರಧಾನಮಂತ್ರಿಗಳೂ ಒಂದು ಕಾಲದಲ್ಲಿ ಸಾಮಾನ್ಯರು.