ಚಿಕ್ಕಮಗಳೂರು: ರಾಜ್ಯದಲ್ಲಿ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದೆಲ್ಲಾ ಪಟಾಕಿಗಳಿಗೆ ನಿಷೇಧ ವಿಧಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಅಲ್ಲದೆ ರಾಜ್ಯದಲ್ಲಿ ಪಟಾಕಿ ಮಾರಾಟಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಲ್ಲದೆ ಪಟಾಕಿ ಅಕ್ರಮ ದಾಸ್ತಾನು ಸೇರಿದಂತೆ ಹಲವು ವಿಚಾರಗಳ ಕುರಿತು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಬೆನ್ನಲ್ಲೆ ಚಿಕ್ಕಮಗಳೂರು ನಗರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಪಟಾಕಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸುಮಾರು 7.60 ಲಕ್ಷ ರೂ ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಉಪ ವಿಭಾಗ ಅಧಿಕಾರಿ, ತಹಸಿಲ್ದಾರ್ ಮತ್ತು ಬಸವನಹಳ್ಳಿ ಹಾಗೂ ನಗರ ಠಾಣೆ ಪಿ.ಎಸ್.ಐ, ಸಿಬ್ಬಂದಿ ಹಾಗೂ ಅಗ್ನಿಶಾಮಕ ಇಲಾಖೆಯ ಸಹಯೋಗದೊಂದಿಗೆ ಈ ದಾಳಿ ನಡೆಸಲಾಗಿದೆ.
ಚಿಕ್ಕಮಗಳೂರು ನಗರದ ಮೂರು ಸ್ಥಳಗಳ ಗೋಡೌನ್ ಗಳಲ್ಲಿ ಪರವಾನಿಗೆ ಇಲ್ಲದೆ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಪಟಾಕಿ ಸಂಗ್ರಹಿಸಲಾಗಿತ್ತು. ಹಾಲೆನಹಳ್ಳಿ ವಿಜಯದುರ್ಗ ದೇವಸ್ಥಾನದ ಒಳಭಾಗದಲ್ಲಿರುವ ಗೋಡೌನ್ ನಲ್ಲಿ 4 ಲಕ್ಷ ಮೌಲ್ಯದ 1000 ಕೆಜಿ ಪಟಾಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಶರೀಫ್ ಗಲ್ಲಿ ಗೋಡೌನ್ 3,50000/- ರೂ ಮೌಲ್ಯದ 684 ಕೆಜಿ ಪಟಾಕಿ ಹಾಗೂ ನಗರದ ಬಿ.ಎಮ್ ರಸ್ತೆ ಮಂಜುನಾಥ ಸ್ವಾಮಿ ಸ್ಟೋರ್ಸ್ ನಲ್ಲಿ 10000/- ರೂ ಮೌಲ್ಯದ 25 ಕೆಜಿ ಪಟಾಕಿ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.