ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚೆಕ್ ಪೋಸ್ಟ್ ಸಿಬ್ಬಂದಿ ಸೂಕ್ತ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ಲಕ್ಷಾಂತರ ರೂ. ನಗದು ಹಾಗೂ ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಮಾಗಡಿ ಹ್ಯಾಂಡ್ ಪೋಸ್ಟ್ ಚೆಕ್ಪೋಸ್ಟ್ನಲ್ಲಿ ವ್ಯಕ್ತಿಯೊಬ್ಬನನ್ನು ತಡೆದು ತಪಾಸಣೆ ನಡೆಸಿದ ವೇಳೆ ಆತನ ಬಳಿ ೨ ಲಕ್ಷ ರೂ. ನಗದು ಪತ್ತೆಯಾಗಿದೆ. ಆದರೆ ಹಣಕ್ಕೆ ಸೂಕ್ತ ದಾಖಲೆಗಳನ್ನು ಆತ ಒದಗಿಸದ ಹಿನ್ನೆಲೆಯಲ್ಲಿ ಸಿಬ್ಬಂದಿ ಮುಟ್ಟುಗೋಲು ಹಾಕಿಕೊಂಡಿದ್ದು. ಹಣವನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ಹಸ್ತಾಂತರಿ ತನಿಖೆ ಮುಂದುವರಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಕೊಪ್ಪ ತಾಲ್ಲೂಕಿನ ಶಾನುವಳ್ಳಿ ಚೆಕ್ ಪೋಸ್ಟ್ನಲ್ಲಿ ಅಕ್ರಮವಾಗಿ ಸಾಗಿಸಲಾ ಗುತ್ತಿದ್ದ ಸುಮಾರು ೬.೩೦ ಲಕ್ಷ ರೂ. ಬೆಲೆ ಬಾಳುವ 453 ಸೀರೆಗಳನ್ನು ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಸೀರೆಗಳು ಯಾರಿಗೆ ಸೇರಿದ್ದು ಹಾಗೂ ಜಿಎಸ್ಟಿ ಸಂಬಂಧ ದಾಖಲೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ ವಾಹನ ಸಮೇತ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಪ್ರಕರಣವನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದ್ದು ತನಿಖೆ ಮುಂದುವರಿದಿದೆ.
ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಏಕಕಾಲದಲ್ಲಿ ಎಂಸಿಸಿ ಅಧಿಕಾರಿಗಳ ತಂಡ ಕಡೂರು ಕ್ಷೇತ್ರದ ವ್ಯಾಪ್ತಿಯ ಹಾಗೂ ಪಟ್ಟಣದ ದಿನಸಿ ಅಂಗಡಿಗಳ ಗೋದಾಮು, ಟ್ರಾನ್ಸ್ ಪೋರ್ಟ್ ಗಳ ಕಚೇರಿ ಮತ್ತು ಆನ್ ಲೈನ್ ಕೋರಿಯರ್ ಕಚೇರಿಗಳಲ್ಲಿ ತಪಾಸಣೆ ನಡೆಸಿ ಸಮರ್ಪಕ ದಾಖಲೆಗಳಿಲ್ಲದ ಸುಮಾರು ೨.೧೭ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಅಕ್ರಮವಾಗಿ ವಸ್ತುಗಳ ಸಾಗಾಣಿಕೆಗೆ ನಿಗಾ ವಹಿಸಲು ೯ ಎಫ್ ಎಸ್ ಟಿ ಅಧಿಕಾ ರಿಗಳ ತಂಡವು ವಾಣಿಜ್ಯ ಮಳಿಗೆಗಳು, ಕೋರಿಯರ್ ಹಾಗೂ ಖಾಸಗಿ ಟ್ರಾನ್ಸ್ ಪೋರ್ಟ್ ನಲ್ಲಿನ ಗೋದಾಮುಗಳನ್ನು ತಪಾಸಣೆ ನಡೆಸಿದರು.
ಕಡೂರು ಪಟ್ಟಣದ ಖಾಸಗಿ ಟ್ರಾನ್ಸ್ ಪೋರ್ಟ್ ನಲ್ಲಿ ೩೮೫೦೦ರೂ ಮೌಲ್ಯದ ೭೭ಸೀರೆಗಳು, ೨೩೯೭೯ರೂ ಮೌಲ್ಯದ ಕುಕ್ಕರ್ ಗಳು, ೪೦೦೦ ರೂ ಮೌಲ್ಯದ ಪ್ಲಾಸ್ಟಿಕ್ ಮತ್ತು ಬೀರೂರಿನ ಟ್ರಾನ್ಸ್ ಪೋರ್ಟ್ ಗೋ ದಾಮಿನಲ್ಲಿದ್ದ ೧೫,೧೪೫೭ರೂ ಮೌಲ್ಯದ ಗೃಹೋಪಯೋಗಿ ವಸ್ತುಗಳಲ್ಲಿ ಯಾವುದೇ ಸಮರ್ಪಕವಾಗಿ ದಾಖಲೆಗಳು ಇಲ್ಲದ ಹಿನ್ನಲೆಯಲ್ಲಿ ವಸ್ತುಗ ಳನ್ನು ವಶಪಡಿಸಿಕೊಂಡು ಅಧಿಕಾರಿಗಳ ತಂಡ ದೂರು ದಾಖಲಿಸಿಕೊಂಡಿದ್ದಾರೆ.
ದಾಳಿಯಲ್ಲಿ ಎಂಸಿಸಿ ನೋಡೆಲ್ ಅಧಿಕಾರಿಗಳಾದ ಸಿ.ಆರ್. ಪ್ರವೀಣ್, ಸಿಪಿಐಗಳಾದ ಎನ್.ಗುರುಪ್ರಸಾದ್, ವಸಂತ ಅರ್ ಆಚಾರ್, ಕಡೂರು ಪುರಸಭೆ ಮುಖ್ಯಾಧಿಕಾರಿ ಕೆ.ರುದ್ರೇಶ್, ಬೀರೂರು ಪುರಸಭೆ ಮುಖ್ಯಾಧಿಕಾರಿ ಶಾಂತಲಾ ಹಾಗೂ ಸಿಬ್ಬಂದಿಗಳು ಹಾಜರಿದ್ದರು.