ಚಿಕ್ಕಮಗಳೂರು: ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಕಾಂಗ್ರೆಸ್ನಿಂದ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಮಾಜಿ ಎಂಎಲ್ಸಿ ವೈಎಸ್ವಿ ದತ್ತ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸುಳಿವು ಕೊಟ್ಟಿದ್ದಾರೆ.
ಕಡೂರು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ವೈಎಸ್ವಿ ದತ್ತ ಅವರ ಬೆಂಬಲಿಗರು ಸಭೆ ನಡೆಸಿದ್ದು, ಬೆಂಬಲಿಗರ ಒತ್ತಾಯಕ್ಕೆ ದತ್ತ ಒಪ್ಪಿಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ಚುನಾವಣೆಯಲ್ಲಿ ಸ್ಪರ್ಧೆ ಖರ್ಚಿಗಾಗಿ ಟವೆಲ್ ಹಿಡಿದು ಸಭೆಯಲ್ಲಿ ಜನರಿಂದ ಭಿಕ್ಷೆ ಕೂಡ ಎತ್ತಿದ್ದಾರೆ.
ಅಭಿಮಾನಿಗಳು ೫೦ ಸಾವಿರ, ಲಕ್ಷ ಹಾಗೂ ೨ ಲಕ್ಷ ಹೀಗೆ ಹಣ ಮತ್ತು ಚೆಕ್ ಕೂಡ ನೀಡಿದ್ದಾರೆ. ಮತ್ತಷ್ಟು ಹಣ ಕೊಡುವುದಾಗಿಯೂ ಭರವಸೆಯನ್ನು ನೀಡಿದ್ದಾರೆ. ಅಭಿಮಾನಿಗಳ ಭರಪೂರ ಬೆಂಬಲಕ್ಕಾಗಿ ಈ ಬಾರಿ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವನ್ನು ದತ್ತ ಅವರು ಕೊಟ್ಟಿದ್ದಾರೆ.
ಜೆಡಿಎಸ್ ತೊರೆದು ಈಚೆಗೆ ಕಾಂಗ್ರೆಸ್ ಸೇರಿದ್ದ ವೈಎಸ್ವಿ ದತ್ತ ಅವರು ಕಡೂರು ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜೊತೆಗಿನ ಒಳಮುನಿಸಿನಿಂದ ಟಿಕೆಟ್ ಕೈತಪ್ಪಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಸೇರುವಾಗ ಬೇಷರತ್ತಾಗಿ ಪಕ್ಷ ಸೇರುತ್ತಿದ್ದೇನೆ ಎಂದು ದತ್ತ ಹೇಳಿದ್ದರು.
ಆದರೆ ಟಿಕೆಟ್ ಗಿಟ್ಟಿಸಲು ಒಳಗೊಳಗೆ ಸಾಕಷ್ಟು ಪ್ರಯತ್ನ ನಡೆಸಿದ್ದರು. ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ದತ್ತ ಅವರಿಗೆ ಟಿಕೆಟ್ ಕೈತಪ್ಪಿದೆ. ದತ್ತ ಬದಲಿಗೆ ಕೆ.ಎಸ್.ಆನಂದ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.