ಚಿಕ್ಕಮಗಳೂರು: ನಗರದ ವಿಜಯಪುರದಲ್ಲಿ ಚಕ್ರವರ್ತಿ ಸೂಲಿಬೆಲೆಯ ‘ನಮೋ ಭಾರತ್’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಗಲಾಟೆ ಮಧ್ಯೆಯೇ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಗಿದೆ.
ಚಕ್ರವರ್ತಿ ಸೂಲಿಬೆಲೆ ಬರುವ ಮಾರ್ಗದಲ್ಲೇ 17 ಯೂತ್ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರೆ, ಇನ್ನೊಂದು ತಂಡ ರಸ್ತೆ ಮಧ್ಯೆ ಅರೆ ಬೆತ್ತಲೆಯಾಗಿಯಾಗಿ ಪ್ರತಿಭಟಿಸಿತು. ಮತ್ತೊಂದು ತಂಡ ಕಾರ್ಯಕ್ರಮದ ವೇದಿಕೆಯ ಹಿಂಭಾಗ ಚಕ್ರವರ್ತಿ ಸೂಲಿಬೆಲೆ ಭಾಷಣದ ಮೇಲೆ ಮಹಡಿ ಮೇಲಿನಿಂದ ಕಪ್ಪು ಬಾವುಟದಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಹೇಳನಕಾರಿಯಾಗಿ ಬರೆದು ಜೋತುಬಿಟ್ಟಿದ್ದರು.
ಬಾವುಟವನ್ನು ಜೋತು ಬಿಡುತ್ತಿದ್ದಂತೆ 200ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಮಹಡಿ ಮೇಲೆ ಹತ್ತಲು, ಕಾಂಗ್ರೆಸ್ ಕಾರ್ಯಕರ್ತರಿಗೆ ಧರ್ಮದೇಟು ನೀಡಲು ಯತ್ನಿಸಿದರು. ಆದರೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಮಾಜಿ ಶಾಸಕ ಸಿಟಿ ರವಿ ಕೂಡ ವೇದಿಕೆ ಮುಂಭಾಗದಿಂದ ಬಂದು ಬಾವುಟ ಪ್ರದರ್ಶಿಸಿದವರ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಬಳಿಕ ಪೊಲೀಸರು ಸರ್ಪಗಾವಲಿನಲ್ಲಿ ಬಾವುಟ ಪ್ರದರ್ಶಿಸಿದ ಮೂವರು ಯುವಕರನ್ನು ಕರೆದೊಯ್ದರು.