ಮೂಡಿಗೆರೆ: ಇತ್ತೀಚಿಗಷ್ಟೇ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಮೂಡಿಗೆರೆ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ವಿರುದ್ಧ ಮೂಲ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಘೋಷಿಸಿದ ಎರಡನೇ ಪಟ್ಟಿಯಲ್ಲಿ ಮೂಡಿಗೆರೆ ಬಿಜೆಪಿ ಹಾಲಿ ಶಾಸಕರಾಗಿದ್ದ ಎಂ.ಪಿ ಕುಮಾರಸ್ವಾಮಿ ಅವರಿಗೆ ಕೈ ತಪ್ಪಿತ್ತು. ಕುಮಾರಸ್ವಾಮಿ ಬದಲಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಅವರಿಗೆ ಟಿಕೆಟ್ ಘೋಷಿಸಿತ್ತು. ಇದಾದ ಬಳಿಕ ಎಂ.ಪಿ ಕುಮಾರಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು.
ಬಿಜೆಪಿ ಟಿಕೆಟ್ ತಪ್ಪಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದರು. ಆದರೆ ಈಗ ಕ್ಷೇತ್ರದಲ್ಲಿ ಎಂ ಪಿ ಕುಮಾರಸ್ವಾಮಿ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಜೆಡಿಎಸ್ ಈ ಹಿಂದೆ ಮಾಜಿ ಸಚಿವ ಬಿಬಿ ನಿಂಗಯ್ಯ ಅವರ ಹೆಸರು ಘೋಷಣೆ ಮಾಡಿತ್ತು, ಅದರೆ ಎಂ ಪಿ ಕುಮಾರಸ್ವಾಮಿ ಸೇರ್ಪಡೆ ಬಳಿಕ ಅವರಿಗೆ ಟಿಕೆಟ್ ಘೋಷಣೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಮೂಲ ಜೆಡಿಎಸ್ ಕಾರ್ಯಕರ್ತರು ಎಂ ಪಿ ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ?ಯಾರ್ರೀ ಕುಮಾರಸ್ವಾಮಿ. ಎಲ್ಲಿದ್ರು ಇಷ್ಟು ದಿನ. ಅವರಿಗೆ ಟಿಕೆಟ್ ನೀಡಿದಲ್ಲಿ ನಾವು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಕಡೂರಿನಲ್ಲಿ ಕೂಡ ಜೆಡಿಎಸ್ ಇದೇ ದ್ವಂದ್ವ ನಿಲುವು ತೋರಿತ್ತು. ಮೊದಲ ಪಟ್ಟಿಯಲ್ಲಿ ಕಡೂರಿನ ಅಭ್ಯರ್ಥಿಯಾಗಿ ಸಿ ಎಂ ಧನಂಜಯ ಅವರ ಹೆಸರು ಘೋಷಣೆಯಾಗಿತ್ತು. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ವೈಎಸ್ ವಿ ದತ್ತಾ ಕೈ ಟಿಕೆಟ್ ಸಿಗದ ಪರಿಣಾಮ ಮರಳಿ ಜೆಡಿಎಸ್ ಸೇರ್ಪಡೆಯಾಗಿದ್ದರು. ದತ್ತಾ ಪಕ್ಷಕ್ಕೆ ವಾಪಾಸ್ ಮರಳುತ್ತಿದ್ದಂತೆ ಸಿಎಂ ಧನಂಜಯ್ ಗೆ ಟಿಕೆಟ್ ಕ್ಯಾನ್ಸಲ್ ಮಾಡಿ ದತ್ತಾ ಅವರ ಹೆಸರು ಘೋಷಿಸಿತ್ತು. ಇಲ್ಲೂ ಕೂಡ ಸಿಎಂ ಧನಂಜಯ್ ಬೆಂಬಲಿಗರು ಆಕ್ರೋಶ ಹೊರಹಾಕಿದ್ದರು.