ಚಿಕ್ಕಮಗಳೂರು: ಮೀಸಲು ಅರಣ್ಯಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮೀಸಲು ಅರಣ್ಯ ಚುರ್ಚೆಗುಡ್ಡ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ೧೭೩ರ ರಸ್ತೆ ಪಕ್ಕದಲ್ಲೇ ಇರುವ ರಿಸರ್ವ್ ಫಾರೆಸ್ಟ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಅರಣ್ಯ ಸುಟ್ಟು ಕರಕಲಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಆ ಜಾಗಕ್ಕೆ ಅಗ್ನಿಶಾಮಕ ವಾಹನ ಕೂಡ ಹೋಗಲು ಸಾಧ್ಯವಾಗದ ಹಿನ್ನೆಲೆ ಅಧಿಕಾರಿಗಳೇ ಸೊಪ್ಪನ್ನ ಕೈಯಲ್ಲಿಡಿದು ಬಡಿಯುವ ಮೂಲಕ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸಿದ್ದಾರೆ.
ಈಗಾಗಲೇ ಬಿಸಿಲಿನ ಝಳಕ್ಕೆ ಮರಗಿಡಗಳ ಎಲೆಗಳು ಸಂಪೂರ್ಣವಾಗಿ ಉದುರಿಹೋಗಿವೆ. ಸ್ವಲ್ಪ ಬೆಂಕಿ ಹೊತ್ತಿಕೊಂಡರೂ ಆರಿಸುವು ತೀರಾ ಕಷ್ಟ. ಇಲ್ಲಿನ ಪರಿಸ್ಥಿತಿ ಕೂಡ ಅದೇ ರೀತಿ ಆಗಿತ್ತು. ಬಾದೆ ಹುಲ್ಲು ಹೆಚ್ಚಾಗಿ ಇರುವ ಈ ಪ್ರದೇಶದಲ್ಲಿ ಬೆಂಕಿ ತಗುಲುತ್ತಿದ್ದಂತೆ ಒಣಗಿದ ಹುಲ್ಲು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಅಧಿಕಾರಿಗಳು ಏನೇ ಹರಿಸಾಹಸಪಟ್ಟರೂ ಬೆಂಕಿಯ ಕೆನ್ನಾಲಿಗೆ ಹೆಚ್ಚುತ್ತಲೇ ಹೋಗಿತ್ತು.
ಚಿಕ್ಕಮಗಳೂರು ಹಾಗೂ ಕಡೂರು ಅರಣ್ಯ ವಿಭಾಗದ ಸಿಬ್ಬಂದಿ ಜೊತೆ ಎ.ಸಿ.ಎಫ್. ಆರ್.ಎಫ್.ಓ. ಡಿ.ಎಫ್.ಓ. ಕೂಡ ಬೆಂಕಿ ನಂದಿಸು ಕಾರ್ಯಾರಣೆಯಲ್ಲಿ ಭಾಗಿಯಾಗಿದ್ದರು. ಸುಮಾರು ೬೦ಕ್ಕೂ ಹೆಚ್ಚು ಸಿಬ್ಬಂದಿ ಎಂಟು ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಬೆಳಗಿನ ಜಾವ ೩.೩೦ರವರೆಗೂ ಬೆಂಕಿ ಆರಿಸಿದ್ದಾರೆ.
ಇನ್ನು ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಅರಣ್ಯ ಪ್ರದೇಶದಲ್ಲೂ ಬೆಂಕಿ ತಗುಲಿದ್ದು ಅಧಿಕಾರಿಗಳು ಇಡೀ ದಿನ ಬೆಂಕಿ ಆರಿಸಿದ್ದಾರೆ. ಕಳಸಾಪುರದಲ್ಲೂ ಕೂಡ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಅರಣ್ಯಕ್ಕೆ ಬೆಂಕಿ ತಗುಲಿದ ಪರಿಣಾಮ ಕೆಲ ಪ್ರಾಣಿ-ಪಕ್ಷಿಗಳು ಕೂಡ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.