ಕುಂದಾಪುರ: ಕಾಂಗ್ರೆಸ್ ಪಕ್ಷವು ಸಂವಿಧಾನದ ಆಶಯಗಳನ್ನು ಪಾಲಿಸಿ ಜಾತಿ ಧರ್ಮ ಭಾಷೆ ರಹಿತವಾದ ಕೆಲಸ ಮಾಡುತ್ತಿದ್ದರೆ ಬಿಜೆಪಿ ಪಕ್ಷವು ಅಧಿಕಾರಕ್ಕಾಗಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ. ರಾಜಕೀಯ ಲಾಭಕ್ಕಾಗಿ ಕೊಲೆ ಮಾಡಿಸುವ, ಮಕ್ಕಳ ಮನದಲ್ಲಿ ದ್ವೇಷವನ್ನು ಬಿತ್ತುವ ಕಾರ್ಯವನ್ನು ಭಾವನಾತ್ಮಕವಾಗಿ ಮಾಡುತ್ತಿದ್ದು ರಾಜ್ಯದಲ್ಲಿ ಪೊಲೀಸ್, ಶಿಕ್ಷಕರ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದರೂ, ಏನೂ ನಡೆದೇ ಇಲ್ಲದಂತಿರುವ ಬಿಜೆಪಿ ಸರಕಾರಕ್ಕೆ ಜನ ಮುಂಬರುವ ಚುನಾವಣೆಯಲ್ಲಿ ಉತ್ತರಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.
ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಕುಂದಾಪುರ – ಗಂಗೊಳ್ಳಿ ಸೇತುವೆ ಬೇಡಿಕೆಯನ್ನು ಈಡೇರಿಸುವ ಕೆಲಸವನ್ನು ಈವರೆಗೆ ಅಧಿಕಾರದಲ್ಲಿದ್ದವರು ಮಾಡಿಲ್ಲ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಈ ಬೇಡಿಕೆ ಈಡೇರಲಿದೆ. ಕುಂದಗನ್ನಡ ಭಾಷೆಯ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ, ಅಧ್ಯಯನಕ್ಕೆ ಅನುಕೂಲವಾಗುವ ಕಾರ್ಯವನ್ನು ಮಾಡಲಾಗುವುದು ಎಂದವರು ಭರವಸೆ ನೀಡಿದರು.
ಎಐಸಿಸಿ ಕಾರ್ಯದರ್ಶಿ ರೋಜೂ.ಎಂ ಜಾನ್ ಮಾತನಾಡಿ ರಾಜ್ಯದ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಕುಂದಾಪುರ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ನನ್ನ ಅವಧಿಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಯಾಗಿದ್ದರೂ ಪರೇಶ್ ಮೇಸ್ತ ಕೊಲೆಯೆಂದು ಬಿಂಬಿಸಿ, ಅಪಪ್ರಚಾರ ಮಾಡಿದ್ದರಿಂದ ನನಗೆ ಸೋಲುವಂತಾಯಿತು ಕಳೆದ ಕಾಂಗ್ರೆಸ್ ಸರಕಾರವಿದ್ದಾಗ ಶೇ. 86 ರಷ್ಟು ಜನರಿಗೆ ಪಡಿತರ ಕಾರ್ಡ್ ನೀಡಲಾಗಿದ್ದರೆ,ಈಗ ಅದು ಶೇ. 60 ರಷ್ಟು ಜನರಿಗೆ ಇಳಿಸಿರುವುದು ಬಿಜೆಪಿ ಸಾಧನೆ. ಮೀನುಗಾರರಿಗೆ ಪರ್ಮಿಟ್ಗೆ 3000 ಲೀ. ಸಿಗುವಂತೆ ಮಾಡಿದ್ದು ಕಾಂಗ್ರೆಸ್ ಆದರೆ ಈಗ ಸಕಾಲದಲ್ಲಿ ಸೀಮೆಎಣ್ಣೆ ಸಿಗದ ಪರಿಸ್ಥಿತಿಯಿದೆ ಪಶು ಸಂಗೋಪನೆ ಇಲಾಖೆಯಲ್ಲಿ ಸಾಕಷ್ಟು ಹುದ್ದೆ ಖಾಲಿಯಿದ್ದು, ಚರ್ಮಗಂಟು ರೋಗದಿಂದ ದನಗಳು ಸಾಯುತ್ತಿವೆ.ನಿಮ್ಮ ನಿಜವಾದ ಗೋರಕ್ಷಣೆ ಇದೆಯೇ ಎನ್ನುವುದಾಗಿ ಪ್ರಶ್ನಿಸಿದರು.
ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಂದಾಪುರದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಬೈಂದೂರಿನ ಮದನ್ ಕುಮಾರ್,ಕೋಟದ ಶಂಕರ್ ಕುಂದರ್, ಮುಖಂಡರಾದ ಎಸ್. ರಾಜು ಪೂಜಾರಿ,ದಿನೇಶ್ ಪುತ್ರನ್, ಅಲೆವೂರು ಹರೀಶ್ ಕಿಣಿ,ಬಿ. ಹೆರಿಯಣ್ಣ,ದೇವಕಿ ಸಣ್ಣಯ್ಯ, ದಿನೇಶ್ ಹೆಗ್ಡೆ ಮೊಳಹಳ್ಳಿ, ಅಶೋಕ ಪೂಜಾರಿ ಬೀಜಾಡಿ, ಸುರೇಂದ್ರ ಶೆಟ್ಟಿ,ಶ್ಯಾಮಲಾ ಭಂಡಾರಿ,ಕಿಶನ್ ಹೆಗ್ಡೆ ಕೊಳ್ಕೆಬಲು,ಮಲ್ಯಾಡಿ ಶಿವರಾಮ ಶೆಟ್ಟಿ,ದೇವಾನಂದ ಶೆಟ್ಟಿ,ವಿಕಾಸ್ ಹೆಗ್ಡೆ, ಸದಾನಂದ ಶೆಟ್ಟಿ ಕೆದೂರು,ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ರೋಷನ್ ಕುಜಮಾರ್ ಶೆಟ್ಟಿ, ಶೇಖರ ಪೂಜಾರಿ ಬಂದೂರು, ಗಣೇಶ್, ಸೌರಭ್ ಬಲ್ಲಾಳ್, ಇಚ್ಚಿತಾರ್ಥ್ ಶೆಟ್ಟಿ, ಮುನಾಫ್ ಕೋಡಿ, ಸುಜನ್ ಶೆಟ್ಟಿ ಉಪಸ್ಥಿತರಿದ್ದರು.
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಕರಾವಳಿ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಪ್ರಸ್ತಾವಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು ಸ್ವಾಗತಿಸಿದರು, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿದರು.