ಚಿಕ್ಕಮಗಳೂರು: ತಾಲ್ಲೂಕಿನ ಕಸಬಾ ಹೋಬಳಿಯ ಇಂದಾವರ ಗ್ರಾಮದ ಸರ್ವೆ ನಂ.೩೧೧ರಲ್ಲಿ ಬಿಳಿಗಿರಿಕಟ್ಟೆ ಎಂಬುದಾಗಿ ದಾಖಲಾಗಿರುವುದನ್ನು ಕೂಡಲೇ ಕೈ ಬಿಟ್ಟು ಹಕ್ಕು ಪತ್ರ ನೀಡಬೇಕು ಎಂದು ದಸಂಸ ನೇತೃತ್ವದಲ್ಲಿ ಎರೆಹಳ್ಳಿ ಗ್ರಾಮಸ್ಥರು ತಾಲ್ಲೂಕು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂಬಂಧ ತಹಶೀಲ್ದಾರ್ ಪಿ.ವಿ.ವಿನಾಯಕ ಸಾಗರ್ ಅವರು ಮನವಿ ಸಲ್ಲಿಸಿದ ದಸಂಸ ಮುಖಂಡರುಗಳು ಹಾಗೂ ಗ್ರಾಮಸ್ಥರು ಇಂದಾವರ ಸರ್ವೆ ನಂಬರಿನಲ್ಲಿ ಬಿಳಿಗಿರಿಕಟ್ಟೆ ಎಂದು ಪಹಣಿ ಬರುತ್ತಿ ರುವುದರಿಂದ ಅದನ್ನು ವಜಾಗೊಳಿಸಿ ಗ್ರಾಮಸ್ಥರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ದಸಂಸ ಜಿಲ್ಲಾ ಮಹಾಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ ಸುಮಾರು ೪೦-೫೦ ವರ್ಷಗಳಿಂದ ಎರೆಹಳ್ಳಿ ಗ್ರಾಮಸ್ಥರು ಅಲ್ಲಿ ವಾಸ ಮಾಡುತ್ತಿದ್ದು ಇದೀಗ ಇಂದಾವರ ಗ್ರಾ.ಪಂ.ನ ಇ-ಸ್ವತ್ತು ಖಾತೆ ಮಾಡಿಸಲು ತೆರಳಿದಾಗ ಕೆರೆ ಜಾಗ ಮಾಡಲು ಬರುವುದಿಲ್ಲ ಎಂದು ಹೇಳಲಾಗಿದೆಂದರು.
ಇದುವರೆಗೂ ಆ ಜಾಗದಲ್ಲಿ ಯಾವುದೇ ಕಟ್ಟೆ ಅಥವಾ ಗುಂಡಿಯಾಗಲೀ ಇರುವುದಿಲ್ಲ. ಗ್ರಾ.ಪಂ.ನಿಂದ ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯವನ್ನು ನೀಡುವುದರೊಂದಿಗೆ ಕಂದಾಯವನ್ನು ಪಾವತಿಸಲಾಗಿದೆ. ಈ ಗ್ರಾಮದಲ್ಲಿ ಹೆಚ್ಚಾಗಿ ಕಾರ್ಮಿಕರು ವಾಸಿಸುತ್ತಿರುವುದರಿಂದ ಸರ್ವೆ ನಂಬರಿನ ಈ ಸಮಸ್ಯೆ ತೀವ್ರ ಆಘಾತಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಈ ಗ್ರಾಮದ ಸಂಬಂಧವಾಗಿ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದ್ದರೂ ಸ್ಥಳ ಪರಿಶೀಲನೆ ಮಾಡಿ ಮೂಲದಾಖಲಾತಿಗಳ ಬಗ್ಗೆ ಯಾವುದೇ ಸ್ಪಷ್ಟ ವರದಿಯನ್ನು ನೀಡಿರುವುದಿಲ್ಲ ಎಂದು ಹೇಳಿದರು.
ಕೂಡಲೇ ತಹಶೀಲ್ದಾರ್ರವರು ಸ್ಥಳ ಪರಿಶೀಲನೆ ನಡೆಸಿ ದಲಿತ ಕಾರ್ಮಿಕರಿಗೆ ಸೂಕ್ತ ನ್ಯಾಯ ದೊರಕಿ ಸಿಕೊಡಬೇಕು. ಒಂದುವೇಳೆ ನ್ಯಾಯ ನೀಡುವಲ್ಲಿ ವಿಳಂಭವಾದಲ್ಲಿ ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಎರೆಹಳ್ಳಿ ಗ್ರಾಮಸ್ಥರು ತಾಲ್ಲೂಕು ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಘಟನಾ ಸಂಚಾಲಕ ಮಹೇಶ್, ಮುಖಂಡರಾದ ಉಮೇಶ್, ಹೊನ್ನಪ್ಪ, ಗ್ರಾಮಸ್ಥರಾದ ಗಂಗರಾಜು, ದಿವ್ಯ, ಹೇಮ, ಉಮಾ, ಮಂಜುಳಾ, ಕಲಾವತಿ, ಕಲ್ಪನಾ, ಗಂಗಮ್ಮ, ಕಮಲಮ್ಮ, ಸುಧಾ ಮತ್ತಿತರರು ಹಾಜರಿದ್ದರು.