ಚಿಕ್ಕಮಗಳೂರು: ಗ್ರಾಮೀಣ ಪ್ರಧೇಶದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಶಾಲೆಗೆ ಅಗತ್ಯವಾದ ಪರಿಕರಗಳು ಹಾಗೂ ಬಡ ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲಾ ಅನುಕೂಲಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಬೊಗಸೆ ಮಹಾಚಂದ್ರ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ.ರವಿ ಶಂಕರ್ ಹೇಳಿದರು.
ಮಲ್ಲಂದೂರು ಬಿಪಿಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆ ದುರಸ್ಥಿ ಕಾರ್ಯ ಹಾಗೂ ನೂತನವಾಗಿ ನಿರ್ಮಿಸಿರುವ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದೇನೆ ಎಂಬ ಕೀಳರಿಮೆ ಬಿಟ್ಟು ಉತ್ತಮವಾದ ವಿದ್ಯಾಭ್ಯಾಸ ಮಾಡಿ. ನಗರ ಪ್ರದೇಶಕ್ಕಿಂತ ಹಳ್ಳಿಗಾಡಿನ ಮಕ್ಕಳು ಕಲೆ, ಕ್ರೀಡೆ, ಸಾಹಿತ್ಯ ಸೇರಿದಂತೆ ಪಾಠ ಪ್ರವಚನದ ಯಾವುದರಲ್ಲೂ ಕಡಿಮೆ ಇಲ್ಲ. ಪ್ರತಿ ವರ್ಷ ನಿಮಗೆ ಅಗತ್ಯವಾದ ಪಠ್ಯ ಪರಿಕರಗಳು, ಟ್ರಾಕ್ ಸ್ಯೂಟ್ ಸೇರಿದಂತೆ ಶಾಲೆ ಉನ್ನತಿ ಕರಣಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಮಾಡಲು ಪ್ರತಿಷ್ಠಾನ ಸಿದ್ದವಿದೆ ಎಂದರು.
ಡಯಟ್ ಪ್ರಚಾರ್ಯ ಬಿ.ಎಲ್.ಶರತ್ಚಂದ್ರ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ಕೊಟ್ಟು ಕಾಳಜಿಯಿಂದ ಸಹಕರಿಸುತ್ತಿರುವ ಮಹಾಚಂದ್ರ ಪ್ರತಿಷ್ಠಾನದ ಕಾರ್ಯ ಶ್ಲಾಘನಾರ್ಹವಾದುದು. ಇದನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಂಡು ಮುಂದೆ ನೀವು ಓದಿದ ಶಾಲೆಗೆ ಕಿಂತಿತ್ತು ಋಣ ತೀರಿಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದರು.
ಮುಖ್ಯೋಪಾಧ್ಯಾಯ ಎಚ್.ಎಂ.ಓಂಕಾರಪ್ಪ ಮಾತನಾಡಿ, ಮಲ್ಲಂದೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೂಲಿ ಕಾರ್ಮಿಕರು ಹಾಗೂ ಬಡ ವರ್ಗದ ಕುಟುಂಬದವರೆ ಹೆಚ್ಚು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆ ಸುಣ್ಣಬಣ್ಣ ಕಾಣದೆ ದುರಸ್ಥಿಯಲ್ಲಿರುವುದರ ಬಗ್ಗೆ ಮಹಾಚಂದ್ರ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಂದಾಗ ಸಂತೋಷದಿಂದ ಒಪ್ಪಿ ಕಾಂಕ್ರಿಟಿಕರಣ, ಟೈಲ್ಸ್ , ವಿದ್ಯುತ್ ಅಳವಡಿಕೆ, ಶಿಕ್ಷಕರ ಕೊಠಡಿ ದುರಸ್ಥಿ, ಪಠ್ಯ ಪುಸ್ತಕ ಸಂಗ್ರಹಣಾ ಬೀರು, ಜಮಕಾನ, ಯುಪಿಎಸ್ ಅಳವಡಿಕೆ ಸೇರಿದಂತೆ ಸುಣ್ಣಬಣ್ಣ ಕಲ್ಪಿಸಿ ನಾಲ್ಕಾರು ಲಕ್ಷ ರೂ ದಾನನೀಡಿ ಸಂಪೂರ್ಣ ಅಭಿವೃದ್ದಿ ಪಡಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಿದ್ದಾರೆ. ಇಂತಹ ದಾನಿಗಳ ಸಹಕಾರದಿಂದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಕೆಗೆ ಪ್ರೇರಣೆಯಾಗಿದ್ದು ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಪ್ರತಿಷ್ಠಾನದ ಬಿ.ಎಂ.ರವಿಶಂಖರ್, ರಾಹುಲ್ ಬೊಗಸೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾಪಂ ಅಧ್ಯಕ್ಷೆ ನಾಗಮಣಿ, ಉಪಾಧ್ಯಕ್ಷ ಸಂದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್, ಮಾಜಿ ಅಧ್ಯಕ್ಷ ಪುಟ್ಟೇಗೌಡ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ್, ಶೌರ್ಯ ವಿಪತ್ತು ನಿರ್ವಹಣಾ ತಂಡದ ಅಧ್ಯಕ್ಷ ಉಮೇಶ್, ಪಿಡಿಓ ಜಗನ್ನಾಥ್, ಶಿಕ್ಷಕರಾದ ಲೋಲಿಬಾಯಿ, ಪ್ರಶಾಂತ್, ಶುಭ, ಫಿಲೋಮಿನಾ ಲೋಬೋ, ನಂದಿನಿ, ತಾಜಿಯಾ ಇದ್ದರು.