ಚಿಕ್ಕಮಗಳೂರು: ಯೋಜನಾಬದ್ಧ, ವ್ಯವಸ್ಥಿತ ಚುನಾವಣೆ ನಡೆಸುವ ಸಲುವಾಗಿ ಪ್ರತಿಯೊಬ್ಬ ಕಾರ್ಯಕರ್ತರೂ ಅವರವರ ಪಾತ್ರವನ್ನು ಚೆನ್ನಾಗಿ ನಿರ್ವಹಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಲಹೆ ನೀಡಿದರು.
ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಪಕ್ಷದ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನಮಗೆ ವಹಿಸಿರುವ ಪಾತ್ರ ಯಾವುದೂ ನಗಣ್ಯ ಎಂದು ಭಾವಿಸಬಾರದು. ಎಲ್ಲದ್ದಕ್ಕೂ ತನ್ನದೇ ಮಹತ್ವ ಇದೆ. ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಣೆ ಮಾಡಬೇಕು. ಕರಪತ್ರ ಮುದ್ರಿಸುವುದು, ಅಭ್ಯರ್ಥಿಗಳು ರಾಜ್ಯ, ರಾಷ್ಟ್ರ ನಾಯಕರ ಪ್ರವಾಸ ಎಲ್ಲದಕ್ಕೂ ಪೂರ್ವಭಾವಿ ಸಿದ್ಧತೆಗಳಿರಬೇಕು ಎಂದರು.
ರಾಜ್ಯದಲ್ಲಿ ಈ ಬಾರಿ ಪಕ್ಷಕ್ಕೆ ಉತ್ತಮ ವಾತಾವರಣ ಇದೆ. ಈ ಚುನಾವಣೆ ಗೆಲುವು ಕರ್ನಾಟಕದ ಬಿಜೆಪಿಗೆ ಮಾತ್ರ ಸೀಮಿತವಲ್ಲ. ಅದು ದೇಶದ ಬಿಜೆಪಿ ದೃಷ್ಠಿಯಿಂದ ಮತ್ತು ದೇಶದ ಹಿತ ದೃಷ್ಠಿಯಿಂದ ಗೆಲ್ಲಲೇ ಬೇಕಾದ ಚುನಾವಣೆ ಇದಾಗಿದೆ ಎಂದರು.
ದೇಶ ಮೊದಲು ಎನ್ನುವ ತತ್ವ ಇರುವ ಪಕ್ಷ ದೇಶವನ್ನು ಮುನ್ನಡೆಸುತ್ತಿದೆ. ಈ ತತ್ವ ವಿಫಲವಾದಲ್ಲಿ ಆ ಜಾಗಕ್ಕೆ ಬೇರೆ ಬೇರೆ ಶಕ್ತಿಗಳು ಬಂದು ಕುಳಿತುಕೊಳ್ಳುತ್ತವೆ. ಅಧಿಕಾರ, ಹಣ, ಜಾತಿ ಬೇರೆ ಬೇರೆ ಶಕ್ತಿಗಳು ಬಂದು ಆವರಿಸಿಕೊಳ್ಳಬಹುದು.
ಈ ಕಾರಣಕ್ಕಾಗಿ ದೇಶ ಮೊದಲು ಎನ್ನುವ ತತ್ವ ಗೆಲ್ಲಬೇಕು. ಕರ್ನಾಟಕದಲ್ಲಿ ಪಕ್ಷ ಗೆದ್ದರೆ ತೆಲಂಗಾಣದಲ್ಲೂ ಗೆಲ್ಲುತ್ತೇವೆ. ಅದರ ಪರಿಣಾಮ ತಮಿಳುನಾಡು, ಪಾಂಡಿಚೇರಿ, ಕೇರಳ, ಆಂಧ್ರಪ್ರದೇಶದ ಮೇಲೂ ಆಗುತ್ತದೆ ಎಂದ ಅವರು ಜಿಲ್ಲೆಯ ಐದೂ ಕ್ಷೇತ್ರದ ಸಂಘಟನೆಯ ಸಾಮರ್ಥ್ಯವನ್ನು ಉಪಯೋಗಿಸಿ ಸಮನ್ವಯವನ್ನು ದೃಷ್ಠಿಯಲ್ಲಿಟ್ಟುಕೊಂಡು ಅವರವರ ಪಾತ್ರವನ್ನು ಚೆನ್ನಾಗಿ ಮಾಡುವ ಮೂಲಕ ಚುನಾವಣಾ ರಥವನ್ನು ಎಳೆಯೋಣ ಎಂದರು.
ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಚಾಲಕ ಭಾನುಪ್ರಕಾಶ್ ,ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ,ಗಿರೀಶ್ ಪಟೇಲ್, ಮತ್ತಿತರರಿದ್ದರು.