ಚಿಕ್ಕಮಗಳೂರು: ನಾವು ಯಾವ ಹೋರಾಟಕ್ಕೆ ಕೇಸರಿ ಹಾಕಿದ್ದೆವೋ ಅದಕ್ಕೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಕೇವಲ ರಾಜಕಾರಣಕ್ಕೆ ಮಾತ್ರ ಅದನ್ನು ಉಪಯೋಗಿಸಲಿಲ್ಲ ಎಂದು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಹಿರೇಕೊಳಲೆ ಗ್ರಾ.ಪಂ.ನ ಹೊಸಪುರ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯುವ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಅಯೋಧ್ಯೆ ಹೋರಾಟ ನಡೆಯಿತು. ಇಂದು ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಲ್ಲದೆ ಕಾಶ್ಮೀರ, ಕಾಶಿ ಕಾರಿಡಾರ್, ಉಜ್ಜಯಿನಿ ಮಹಾಕಾಲ ದೇವಸ್ಥಾನ ಪುನರುತ್ಥಾನ, ಗುಜರಾತ್ನ ಸೋಮನಾಥ ದೇವಾಲಯ ಈ ಎಲ್ಲದರ ಜೊತೆಗೆ ನಮ್ಮ ದತ್ತಪೀಠಕ್ಕೂ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ, ನ್ಯಾಯಾಲಯದಲ್ಲೂ ಹೋರಾಡಿ, ಜನರನ್ನೂ ಸಂಘಟಿಸಿದ ಪರಿಣಾಮ ಈ ವರ್ಷದಿಂದ ಮೊದಲ ಬಾರಿಗೆ ದತ್ತಪೀಠದಲ್ಲಿ ಹಿಂದೂ ಅರ್ಚಕರಿಂದ ಪೂಜೆ ನಡೆಯುವಂತಾಗಿದೆ ಎಂದರು.
ಅಭಿವೃದ್ಧಿ ವಿಚಾರದಲ್ಲೂ ಚಿಕ್ಕಮಗಳೂರು ಹಿಂದೆ ಬೀಳಬಾರದು ಎಂದು ಸರ್ವಪ್ರಯತ್ನ ಪಟ್ಟು ಹಿರೇಕೊಳಲೇ ಪಂಚಾಯ್ತಿ ಒಂದಕ್ಕೇ ಈ ಅವಧಿಯಲ್ಲಿ ೧೬ ಕೋಟಿ ಗೂ ಹೆಚ್ಚು ಅನುದಾನ ಮಂಜೂರು ಮಾಡಿಸಿದ್ದೇವೆ ಎಂದರು.
ಚಿಕ್ಕಮಗಳೂರಿಗೆ ಮೆಡಿಕಲ್ ಕಾಲೇಜು ಬೇಕೆನ್ನುವುದು ಹತ್ತಾರು ವರ್ಷಗಳ ಹೋರಾಟ. ಅದಕ್ಕೆ ೬೩೦ ಕೋಟಿ ರೂ. ಮಂಜೂರು ಮಾಡಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ತೇಗೂರು ಬಳಿ ಮೆಡಿಕಲ್ ಕಾಲೇಜು ಕಟ್ಟಡವನ್ನು ವೇಗಗತಿಯಲ್ಲಿ ನಿರ್ಮಿಸಲಾಗುತ್ತಿದೆ. ಇನ್ನು ಮುಂದೆ ಗಂಭೀರ ಪರಿಸ್ಥಿತಿಯಲ್ಲಿ ಚಿಕಿತ್ಸೆಗಾಗಿ ಶಿವಮೊಗ್ಗ, ಹಾಸನಕ್ಕೆ ಹೋಗಬೇಕಾದ ಅವಶ್ಯಕತೆ ಇರುವುದಿಲ್ಲ. ಅಲ್ಲಿ ಸಿಗುವ ಬಹುತೇಕ ಚಿಕಿತ್ಸೆ ಇಲ್ಲೇ ಸಿಗಲಿದೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಗರೀಬಿ ಕಲ್ಯಾಣ್ ಅನ್ನ ಯೋಜನೆ ಮೂಲಕ ದೇಶದ ಉದ್ದಗಲಕ್ಕೆ ೮೪ ಕೋಟಿ ಜನರಿಗೆ ಮೂರು ವರ್ಷಗಳಿಂದ ಸತತವಾಗಿ ಉಚಿತವಾಗಿ ಪಡಿತರ ನೀಡುತ್ತಿದ್ದಾರೆ. ಕೋವಿಡ್ ಲಸಿಕೆಯನ್ನೂ ಉಚಿತವಾಗಿ ಕೊಟ್ಟಿದ್ದಾರೆ. ಬಡವರಿಗೆ ಬಲ ಸಿಗಬೇಕು ಎಂದು ಉಚಿತ ಗ್ಯಾಸ್ ಸಂಪರ್ಕ ನೀಡಿದ್ದಾರೆ. ಸೌಭಾಗ್ಯ ಯೋಜನೆಯಡಿ ಉಚಿತ ವಿದ್ಯುತ್ ನೀಡಿದ್ದಾರೆ ಎಂದರು.
ಯುವ ಸಂಜೆ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳು, ಮನರಂಜನೆ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು ಭಾಗವಹಿಸಿದರು.
ಗ್ರಾ.ಪಂ.ಅಧ್ಯಕ್ಷೆ ಕವಿತಾ, ಮಾಜಿ ಅಧ್ಯಕ್ಷ ಹಿರೆಕೊಳಲೆ ಮಂಜುನಾಥ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗಪಾಲ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಳ್ಳಿ ಮಹೇಶ್, ಜಿ.ಪಂ.ಮಾಜಿ ಸದಸ್ಯೆ ಜಸಂತಾ ಅನಿಲ್ ಕುಮಾರ್, ನಗರಸಭೆ ಸದಸ್ಯೆ ಕವಿತಾ ಶೇಖರ್, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಈಶ್ವರೇಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಕೆ.ಮೋಹನ್, ನಾರುಕಂತೆ ಮಠದ ಶಿವಯ್ಯ, ಐಕೆ ನರೇಂದ್ರ, ಇಂದಾವರ ನವೀನ್, ಮಲ್ಲಯ್ಯ ಇತರರು ಭಾಗವಹಿಸಿದ್ದರು.