ಚಿಕ್ಕಮಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಲೇ ಇದೆ. ಆದರೆ ಬಿಜೆಪಿಯಿಂದ ಇನ್ನೂ ಕೂಡ ಟಿಕೆಟ್ ಘೋಷಣೆ ಆಗಿಲ್ಲ. ಆದರೂ ಈಗಾಗಲೇ ಕೆಲ ಟಿಕೆಟ್ ಆಕಾಂಕ್ಷಿಗಳು ತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರವನ್ನು ಆರಂಭಿಸಿದ್ದಾರೆ.
ಅದರಲ್ಲೂ ಮೂಡಿಗೆರೆ ಕ್ಷೇತ್ರದಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್ ನೀಡಬೇಡಿ ಎಂದು ಒಂದು ಬಣದ ಒತ್ತಾಯವಾದರೆ, ಮತ್ತೊಂದೆಡೆ ಕೆಲ ಕಾರ್ಯಕರ್ತರು ಟಿಕೆಟ್ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಹೀಗೆ ಟಿಕೆಟ್ ವಿಚಾರವಾಗಿ ಪರ-ವಿರೋಧದ ಗುಂಪಿನ ಮಧ್ಯೆ ಕುಮಾರಸ್ವಾಮಿ ಬೇಸತ್ತು ಹೋಗಿದ್ದಾರೆ. ಈ ಜಂಜಾಟದ ನಡುವೆಯೇ ಇದೀಗ ಎಂ.ಪಿ.ಕುಮಾರ ಸ್ವಾಮಿಯವರು ಸುಗ್ಗಿ ಹಬ್ಬದ ಪ್ರಯುಕ್ತ ಕೆಂಡ ತುಳಿದು ಗಮನ ಸೆಳೆದಿದ್ದಾರೆ.
ಕಳಸ ತಾಲೂಕಿನಲ್ಲಿ ಬೀರಲಿಂಗೇಶ್ವರ ಸ್ವಾಮಿಯ ಸುಗ್ಗಿ ಉತ್ಸವ ಹಮ್ಮಿಕೊ ಳ್ಳಲಾಗಿ ದ್ದು, ಕೆಂಡ ತುಳಿಯುವ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿತ್ತು. ಈ ವೇಳೆ ಶಾಸಕ ಎಂ.ಪಿ.ಕುಮಾರ ಸ್ವಾಮಿಯವರು ರಾಜಕೀಯ ಡೋಲಾಯಮಾನ ಸ್ಥಿತಿಯಲ್ಲಿ ಕಾರ್ಯಕರ್ತರ ಜೊತೆ ಓಡಿ ಹೋಗಿ ಕೆಂಡ ತುಳಿದು ಗಮನ ಸೆಳೆದಿದ್ದಾರೆ.
ಎಂ.ಪಿ.ಕುಮಾರಸ್ವಾಮಿ ಪರ, ವಿರೋಧದ ಚರ್ಚೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಬಿಜೆಪಿ ವಲಯದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳು ಆಗುತ್ತಲೇ ಇವೆ. ಮೂಡಿಗೆರೆ ಕ್ಷೇತ್ರದಿಂದ ಎಂ.ಪಿ.ಕುಮಾರಸ್ವಾಮಿಯವರಿಗೆ ಬಿಜೆಪಿ ಟಿಕೆಟ್ ನೀಡಬಾರದು ಎಂದು ಒಂದು ಬಣ ಮುಂದಾಗಿದೆ. ಮತ್ತೊಂದೆಡೆ ಬಣ ಎಂ.ಪಿ.ಕುಮಾರ ಸ್ವಾಮಿಯವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದೆ. ಈ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಉಳಿಸುವಂತೆ ಸಿ.ಟಿ.ರವಿಗೆ ಮನವಿ ಮಾಡಲಾಗಿದೆ.
ಎಂ.ಪಿ.ಕುಮಾರಸ್ವಾಮಿಯವರ ಬೆಂಬಲಿತ ಕಾರ್ಯಕರ್ತರು ಸಿ.ಟಿ.ರವಿಯವರ ನಿವಾಸಕ್ಕೆ ಆಗಮಿಸಿದ್ದು, ಮೂಡಿಗೆರೆ ಕ್ಷೇತ್ರದಿಂದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು. ಮತ್ತು ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ಎಂ.ಪಿ.ಕುಮಾರಸ್ವಾಮಿ ಅವರ ಪರ-ವಿರೋಧದ ಬಣಗಳ ಮುಸುಕಿನ ಗುದ್ದಾಟ ಗುಟ್ಟಾಗಿರದೇ ಸಾರ್ವಜನಿಕ ವಾಗಿ ಬಹಿರಂಗವಾಗಿದೆ. ಪರ-ವಿರೋಧದ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಟಿಕೆಟ್ ಸಂಬಂಧ ನಡೆಯುತ್ತಿರುವ ಈ ಬಣ ಗುದ್ದಾಟ ಬಿಜೆಪಿ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಬಿಜೆಪಿಯ ಹಿರಿಯ ನಾಯಕರು ಯಾವ ರೀತಿ ಪರಿಹಾರ ಹುಡುಕುತ್ತಾರೆಯೋ ಎನ್ನುವುದನ್ನು ಕಾದುನೋಡಬೇಕಿದೆ ಅಷ್ಟೇ.
ಕುಮಾರಸ್ವಾಮಿಗೆ ಟಿಕೆಟ್ ನೀಡದಂತೆ ಆಗ್ರಹ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಈ ಬಾರಿ ಹಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರು ಸ್ವಪಕ್ಷದವರ ವಿರುದ್ಧವೇ ತಿರುಗಿಬಿದ್ದಾರೆ. ಇನ್ನು ಮತ್ತೊಂದೆಡೆ ಇದೇ ರೀತಿಯಲ್ಲಿ ಬಿಜೆಪಿ ಕಾರ್ಯ ಕರ್ತರು ಮೂಡಿಗೆರೆಯಿಂದ ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಈ ಬಾರಿ ಟಿಕೆಟ್ ನೀಡಬೇಡಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸಿ.ಟಿ.ರವಿ ಮನೆಗೆ ಭೇಟಿ ನೀಡಿದ ಸಾವಿರಾರು ಕಾರ್ಯಕರ್ತರು, ಎಂ.ಪಿ. ಕುಮಾರಸ್ವಾಮಿಗೆ ಈ ಬಾರಿ ಟಿಕೆಟ್ ನೀಡಬೇಡಿ ಎಂದು ಆಗ್ರಹಿಸಿದ್ದರು.
ಇತ್ತೀಚೆಗಷ್ಟೇ ಶಾಸಕ ಎಂ.ಪಿ. ಕುಮಾರಸ್ವಾಮಿ ಬಿಟ್ಟು ಹೊಸ ಮುಖಗಳಿಗೆ ಟಿಕೆಟ್ ಕೊಡಿ ಎಂದು ನೂರಾರು ಕಾರ್ಯಕರ್ತರು ಮೂಡಿಗೆರೆಯ ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಬಿಜೆಪಿ ಕಾರ್ಯಕರ್ತರ ಆಕ್ರೋಶ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ರೋಡ್ ಶೋ ಅರ್ಧಕ್ಕೆ ಮೊಟಕು ಗೊಳಿಸಿದ್ದರು. ತಮ್ಮ ಕಾರ್ಯಕರ್ತರು ರಸ್ತೆ ಮಧ್ಯೆಯೇ ಅಡ್ಡ ಹಾಕಿ ಪ್ರತಿಭಟನೆ ನಡೆಸಿದ ಕಾರಣ ಬಿ.ಎಸ್. ಯಡಿಯೂರಪ್ಪ ಕೋಪಗೊಂಡು ರೋಡ್ ಶೋ ರದ್ದು ಮಾಡಿ ಹೆಲಿಪ್ಯಾಡ್ನತ್ತ ತೆರಳಿದ್ದರು. ಈ ವೇಳೆ ಸಿ.ಟಿ. ರವಿ ಮಾತನಾಡಿ, ಪಕ್ಷದ ಮರ್ಯಾದೆ ಕಳೆಯುತ್ತಿದ್ದೀರಾ? ನೀವು ಮೊದಲೇ ಮಾತನಾಡಿಕೊಳ್ಳಬೇಕಿತ್ತು ಎಂದು ಹೇಳುವ ಮೂಲಕ ರಾಷ್ಟ್ರಿಯ ಹೆದ್ದಾರಿಯಲ್ಲಿ ತಮ್ಮ ಕಾರ್ಯಕರ್ತರಿಗೆ ಕ್ಲಾಸ್ ತೆಗೆದುಕೊಂಡಿದ್ದರು.