ಚಿಕ್ಕಮಗಳೂರು: ಹಲವು ಅಭಿವೃದ್ಧಿ ಕಾರ್ಯಗಳು ಎಲ್ಲಾ ವಾರ್ಡ್ಗಳಲ್ಲಿ ನಡೆಯುತ್ತಿದೆ. ನಗರಸಭೆ ಆವರಣದಲ್ಲಿ ೧೦ ಲಕ್ಷ ರೂ. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಇಂದು ಚಾಲನೆ ನೀಡಿದ್ದೇವೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು ಅವರು ಅಮೃತ್ ಯೋಜನೆ, ಒಳಚರಂಡಿ ಯೋಜನೆ ಕಾಮಗಾರಿಗಳು ಸಹ ಗಡುವಿನೊಳಗೆ ಹಸ್ತಾಂತರಿಸಲಿದ್ದಾರೆ. ಅದಕ್ಕೆ ಬೇಕಾದ ಕೆಲಸ ಆಗ್ತಿದೆ ಎಂದರು. ನಾಲ್ಕನೇ ಹಂತದ ನಗರೋತ್ಥಾನ ಕಾಮಗಾರಿ ಮುಂದಿನ ವಾರದಿಂದ ಪ್ರಾರಂಭವಾಗುತ್ತದೆ. ಇದರ ಜೊತೆಗೆ ಎಲ್ಇಡಿ ಬಲ್ಬ್ ಅಳವಡಿಸುವ ಕಾರ್ಯವೂ ನಡೆಯುತ್ತಿದೆ ಎಂದರು.
ಬೀದಿ ಬದಿ ವ್ಯಾಪಾರಸ್ಥರಿಗೆ ಪ್ರಧಾನ ಮಂತ್ರಿ ಸ್ವಧಿ ಯೋಜನೆಯಡಿ 785 ಫಲಾನುಭವಿಗಳಿಗೆ ತಲಾ 10 ಸಾವಿರ ರೂ. ಹಾಗೂ 824 ಫಲಾನುಭವಿಗಳಿಗೆ ತಲಾ ಹತ್ತು ಸಾವಿರ ಸೇರಿ 1.36 ಕೋಟಿ ರೂ.ಗಳನ್ನು ಆತ್ಮ ನಿರ್ಭರಕ್ಕಾಗಿ ನೀಡಿದೆ. ಅವರು ಸೂಕ್ತ ಸಮಯದಲ್ಲಿ ಮರುಪಾವತಿ ಮಾಡಿದರೆ ಎರಡು ಪಟ್ಟು ಸಾಲ ಪಡೆಯಲು ಅರ್ಹರಾಗುತ್ತಾರೆ. 1 ಲಕ್ಷ ರೂ.ವರೆಗೆ ಸಾಲ ಪಡೆಯಲು ಸಾಧ್ಯವಿದೆ ಎಂದರು.
ಇದು ಬೀದಿ ಬದಿ ವ್ಯಾಪಾರಸ್ಥರಿಗೆ ಒಂದು ಸುವರ್ಣಾವಕಾಶ. ಇದನ್ನು ಬಳಸಿಕೊಳ್ಳಬೇಕು. ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಕೊಟ್ಟರೆ ಸಾಕು ಬಂಡವಾಳ ವೆಚ್ಚವಾಗಿ ನೆರವು ಸಿಗಲಿದೆ. ಮೊದಲು ಇವರೆಲ್ಲರೂ ಖಾಸಗಿಯವರಲ್ಲಿ ಮೀಟರ್ ಬಡ್ಡಿಯಲ್ಲಿ ಸಾಲ ಪಡೆದು ತಿಂಗಳಿಗೆ ಶೇ.೩೦೦ ರಷ್ಟು ಬಡ್ಡಿ ಕೊಡಬೇಕಿತ್ತು. ಆ ರೀತಿ ಆಗಬಾರದು, ದುಡಿಯುವ ವರ್ಗಕ್ಕೆ ನೆರವಾಗಬೇಕು ಎನ್ನುವ ಕಾರಣಕ್ಕೆ ಯೋಜನೆ ಬಂದಿದೆ. ಸಾಲ ಪಡೆದು ಮೋಸ ಮಾಡಿದರೆ ಜೀವನದಲ್ಲಿ ಮುಂದೆ ಯಾವುದೇ ಕಾರಣಕ್ಕೆ ಸಾಲ ಪಡೆಯಲು ಸಾಧ್ಯವಿರುವುದಿಲ್ಲ ಎಂದರು.