ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಲೋಕದಲ್ಲಿ ಕುವೆಂಪು ಸೇರಿದಂತೆ ಅನೇಕ ಮಹಾನೀಯರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರ ಸೇವೆಯಿಂದ ಕನ್ನಡ ಸಾಹಿತ್ಯವು ಇಡೀ ವಿಶ್ವಾದಾದ್ಯಂತ ಹರಡಿಕೊಂಡು ನಾಡಿನ ಸೊಗಡನ್ನು ಎಲ್ಲೆಡೆ ಪಸರಿಸುತ್ತಿದೆ ಎಂದು ಉಪನ್ಯಾಸಕ ಡಾ|| ಹೆಚ್.ಎಸ್. ಸತ್ಯನಾರಾಯಣ ಹೇಳಿದರು.
ನಗರದ ಎಂ.ಎಲ್.ಎಂ.ಎನ್. ಬಿ.ಇಡಿ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿ ಸಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡುತ್ತಿದ್ದರು.
ದೇಶಕ್ಕೆ ರಾಷ್ಟ್ರಗೀತೆಯನ್ನು ರವೀಂದ್ರನಾಥ ಠಾಗೂರ್ ರಚಿಸಿರುವುದನ್ನು ಪ್ರೇರಣೆಯಾಗಿ ತೆಗೆದುಕೊಂಡು ಕುವೆಂಪು ಅವರು ಕರ್ನಾಟಕಕ್ಕೆ ನಾಡಗೀತೆ ರಚಿಸಿ ಕನ್ನಡದ ಕಂಪನ್ನು ಬೆಳೆಸಿದವರು ಎಂದ ಅವರು ಕುವೆಂಪು ಸಾಹಿತ್ಯ ಸಿಹಿಯಾದ ಲಡ್ಡುವಿನಂತೆ ಸುತ್ತಮುತ್ತಲು ಎಲ್ಲಾ ಕಡೆಯಿಂದಲೂ ಸಿಹಿಯೇ ತುಂಬಿರುತ್ತದೆ ಎಂದು ಬಣ್ಣಿಸಿದರು.
ಇಂದಿನ ವಿದ್ಯಾರ್ಥಿಗಳು ಹಾಗೂ ನಾಗರೀಕರು ಜೀವಮಾನದಲ್ಲಿ ಒಮ್ಮೆಯಾದರೂ ಕುವೆಂಪು ಅವರ ರಚಿಸಿರುವ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಅವರ ರಚನೆಗಳಲ್ಲಿ ಹೊಂಬೆಳಕು ಪದ ಸೇರಿದಂತೆ ಅನೇಕ ಕನ್ನಡ ಹೊಸ ಪದಗಳು ಅವರಿಂದ ಹುಟ್ಟಿಕೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು.
ಗಿರಿಶಿಖರ ಹಾಗೂ ಪ್ರರ್ವತಶ್ರೇಣಿಗಳು ಅದೆಷ್ಟು ಎತ್ತರಗಳಲ್ಲಿವೆಯೇ ಅದೇ ರೀತಿಯ ಕುವೆಂಪು ಸಾಹಿತ್ಯವು ಅಷ್ಟೇ ಎತ್ತರವನ್ನು ಮುಟ್ಟಿದೆ. ಭೂಮಿಯಲ್ಲಿ ಕಾಣಸಿಗುವ ನೀಲಾಕಾಶ, ಸುಂದರ ಜಲಪಾತ ಹಾಗೂ ಹಚ್ಚಹಸಿರಿ ನಿಂದ ಕೂಡಿರುವ ಸೊಬಗನ್ನು ಪ್ರಕೃತಿ ದೇವತೆಯೆಂದೆ ನಂಬಿದವರು. ದೇವಾಲಯಕ್ಕಿಂತ ಪ್ರಕೃತಿಯಲ್ಲೇ ಕಂಡು ಬರುವ ಆ ಸೌಂದರ್ಯದಲ್ಲೇ ದೇವರನ್ನು ಕಾಣುತ್ತಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಜೋಳ್ದಾಳ್ ನರ್ಸಿಂಗ್ ಹೋಂ ಮುಖ್ಯಸ್ಥ ಡಾ|| ಜೆ.ಪಿ.ಕೃಷ್ಣೇಗೌಡ ದತ್ತಿದಾನಿಗಳಾದ ದಿ|| ತುಳಸಮ್ಮ ಮತ್ತು ರಾಮೇಗೌಡ ಅವರು ಕನ್ನಡ ಸಾಹಿತ್ಯ ಬೆಳವ ಣಿಗೆಗೆ ಹಾಗೂ ಆಶಾಕಿರಣ ಮಕ್ಕಳ ಶ್ರೇಯೋಭಿವೃದ್ದಿ ಅನೇಕ ಬಾರಿ ಸಹಕಾರ ನೀಡಿ ಬೆಳೆಸಿದ್ದರು ಎಂದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಬೇರೆ ರಾಜ್ಯ ಅಥವಾ ಬೇರೆ ದೇಶಗಳಿಗೆ ತೆರ ಳುತ್ತಾರೆ. ಎಲ್ಲಿಯೇ ಇದ್ದರೂ ತಮ್ಮ ತಾಯ್ನಾಡಿನ ಮಾತೃಭಾಷೆಯನ್ನು ಮರೆಯಬಾರದು. ಪ್ರತಿಯೊಂದಲ್ಲೂ ನಾಡಿನ ಸಂಸ್ಕೃತಿಯ ಕಂಪನ್ನು ಅನುಭವಿಸಬೇಕು. ಮೆಟ್ಟಿದ ಮಣ್ಣಿನಲ್ಲಿ ಕನ್ನಡ ಮಣ್ಣು, ಕುಡಿಯುವ ನೀರಿನಲ್ಲಿ ಕಾವೇರಿ ನೀರನ್ನು ನೆನೆದರೆ ಮಾತ್ರ ಕನ್ನಡ ನಾಡಿಗೆ ಬೆಲೆ ಕೊಟ್ಟಂತಾಗುತ್ತದೆ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಜಿಲ್ಲೆಯ ವಿವಿಧೆಡೆ ಅತಿಹೆಚ್ಚು ದತ್ತಿಕಾರ್ಯಕ್ರಮಗಳನ್ನು ಆಯೋಜಿಸಿ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ಉತ್ತಮ ಮಾಹಿತಿ ಕೊಡುವ ಕಾರ್ಯಕ್ರಮವನ್ನು ಅನೇಕ ವರ್ಷಗಳಿಂದ ಕಸಾಪ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಮಾತನಾಡಿ ಕನ್ನಡಪುಸ್ತಕಗಳ ಅಧ್ಯಯನ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕರ ಮೇಲಿದ್ದು ನಾಡಿನ ಋಣ ತೀರಿಸಲು ಇದೊಂದು ಸದಾವಕಾಶವೆಂದು ಭಾವಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಖಾಂಡ್ಯ ಹೋಬಳಿಯಲ್ಲಿ ರಾಜ್ಯಮಟ್ಟದ ಕಮ್ಮಟ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು ದಿನಾಂಕವನ್ನು ನಿಗಧಿಗೊಳಿಸಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ, ಪ್ರಸ್ತೂತಿ ತಜ್ಞೆ ಡಾ|| ಜ್ಯೋತಿ ಕೃಷ್ಣ, ಆರ್ಯುರ್ವೇದ ವೈದ್ಯೆ ಡಾ|| ಗೌರಿ ವರುಣ್, ಎಂ.ಎಲ್.ಎಂ.ಎನ್. ಕಾಲೇಜು ಪ್ರಾಂಶುಪಾಲ ಡಾ|| ಜಿ.ಎಂ. ಗಣೇಶ್, ಕಸಾಪ ಹೋಬಳಿ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿ ಹರ್ಷಿತ ನಿರೂಪಿಸಿದರು. ರಮ್ಯ ಮತ್ತು ರುಕ್ಸಾನ ಪ್ರಾರ್ಥಿಸಿದರು. ಕಸಾಪ ಸಂಘಟನಾ ಸಂಚಾಲಕ ಎಸ್.ಎಂ.ಲೋಕೇಶಪ್ಪ ಸ್ವಾಗತಿಸಿದರು. ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ವಂದಿಸಿದರು.