ಚಿಕ್ಕಮಗಳೂರು: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಅವರ ಮಗನಿಗೆ ಟಿಕೆಟ್ ತಪ್ಪಿದ್ದರಿಂದ ಈಶ್ವರಪ್ಪನಿಗೆ ಬುದ್ದಿ ಭ್ರಮಣೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬೆನ್ ಮೊಸಸ್ ಆರೋಪಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ, ಬಿಜೆಪಿಯವರು ಈಶ್ವರಪ್ಪನಿಗೆ ಕೈಕೊಟ್ಟಿ ದ್ದರಿಂದ ಬುದ್ದಿ ಭ್ರಮಣೆಯಾಗಿರುವ ಈಶ್ವರಪ್ಪ ಬಿಜೆಪಿ ಮೇಲಿರುವ ಕೋಪ ವನ್ನು ಕಾಂಗ್ರೆಸ್ ಮೇಲೆ ತೋರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈಶ್ವರಪ್ಪ ತಮ್ಮ ಹರಕು ಬಾಯಿಯಿಂದಲೇ ತಮ್ಮ ರಾಜಕೀಯ ಭವಿಷ್ಯವನ್ನು ಹಾಳು ಮಾಡಿಕೊಂಡಿದ್ದು, ಈ ಹಿಂದೆ ಇವರ ಬಾಯಿ ಶುಚಿತ್ವಕ್ಕಾಗಿ ಪೆನಾಯಿಲ್ ಮತ್ತು ಕಡ್ಡಿ ಪೊರಕೆಯನ್ನು ಕಾಂಗ್ರೆಸ್ ಪಕ್ಷದಿಂದ ಕಳುಹಿಸಿದ್ದೆವು. ಆಗಲೇ ಅವರು ಬಾಯಿ ಶುಚಿ ಮಾಡಿಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಚುನಾವಣೇ ನಂತರ ಈಶ್ವರಪ್ಪ ಮೂಲೆ ಗುಂಪಾಗಲಿದ್ದಾರೆ ಎಂದು ಕುಟುಕಿದ್ದಾರೆ.
ಐದು ವರ್ಷ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಬಿಜೆಪಿ ಚುನಾವಣೆ ಸಂದರ್ಭದಲ್ಲಿ ನಾವು ಜಾತಿವಾದಿಗಳಲ್ಲ, ಕೋಮುವಾದಿಗಳಲ್ಲ ಎಂದು ಬಿಂಬಿಸಲು ಹೊರಟಿದೆ. ಇವೆ ಮಾತಿನಿಂದಲೇ ಇವರ ನಾಟಕೀಯ ಬಣ್ಣ ಜನರಿಗೆ ಮನವರಿಕೆ ಆಗುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ವಧರ್ಮದ ಶಾಂತಿಯ ತೋಟ ಇಲ್ಲಿ ಎಲ್ಲಾ ಧರ್ಮ ದವರಿಗೂ ಅವಕಾಶವಿದೆ. ರಾಜ್ಯದಲ್ಲಿ ಕಾಂಗ್ರೆಸ್ಗೆ ಬಹುಮತ ಬರುವ ಎಲ್ಲಾ ಸೂಚನೆ ಕಂಡು ಬರುತ್ತಿದ್ದು, ಇದರಿಂದ ಬಿಜೆಪಿಯವರು ಕಂಗಲಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ. ಬಿಜೆಪಿಯ ಭ್ರಷ್ಟಾಚಾರದ ಆಡಳಿತದಿಂದ ಬೇಸತ್ತಿರುವ ಮತದಾರರು ಬದಲಾವಣೆಯನ್ನು ಬಯಸಿದ್ದು, ಕಾಂಗ್ರೆಸ್ ಪಕ್ಷದ ಅಲೆ ಅಭ್ಯರ್ಥಿಗಳನ್ನು ಗೆಲುವಿನೆಡೆಗೆ ಕೊಂಡೊಯ್ಯಲಿದೆ ಎಂದು ಹೇಳಿದ್ದಾರೆ.