ಚಿಕ್ಕಮಗಳೂರು: ಪಂಚರತ್ನ ಯೋಜನೆಗಳು ಕೆಳಮಟ್ಟದ ಜನಸಾಮಾನ್ಯರಿಗೂ ಸ್ಪಂದಿಸುವ ಸಲುವಾಗಿ ಜೆಡಿಎಸ್ ವರಿಷ್ಟರು ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಲಾ ಗಿದ್ದಾರೆ ಎಂದು ಚಿಕ್ಕಮಗಳೂರು ಜೆಡಿಎಸ್ ವಿಧಾನಸಭಾ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಹೇಳಿದರು.
ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ಹುಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇತು ಮಾರನಹಳ್ಳಿಗೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಪಂಚರತ್ನ ಯೋಜನೆ ಹಾಗೂ ಜೆಡಿಎಸ್ ಬೆಂಬಲಿಸಿದರೆ ಮುಂದಿನ ಯಾವ ರೀತಿಯಲ್ಲಿ ಜನಪರ ಕೆಲಸ ಕೈಗೊಳ್ಳಲಾಗುವುದು ಎಂದು ಚರ್ಚಿಸಿ ಅವರು ಮಾತನಾಡುತ್ತಿದ್ದರು.
ನಾಡಿನ ಶ್ರೇಯೋಭಿವೃದ್ದಿಗಾಗಿ ವರಿಷ್ಟರು ವಸತಿ ಆಸರೆ, ಆರೋಗ್ಯವೇ ಸಂಪತ್ತು, ಶಿಕ್ಷಣವೇ ಆಧುನಿಕ ಶಕ್ತಿ, ರೈತ ಚೈತನ್ಯ ಹಾಗೂ ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ ಕುರಿತು ಯೋಜನೆಗಳನ್ನು ಬಿಡುಗಡೆ ಗೊಳಿಸಿ ಪ್ರತಿಯೊಬ್ಬ ಜನಸಾಮಾನ್ಯರಿಗೂ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದು ಮತದಾರರು ಈ ಬಾರಿ ಪೂರ್ಣ ಸಹಕಾರ ನೀಡಿದರೆ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.
ರೈತಾಪಿ ವರ್ಗಕ್ಕೆ ಆರ್ಥಿಕವಾಗಿ ಸದೃಢವಾಗುವ ನಿಟ್ಟಿನಲ್ಲಿ ಬಹಳಷ್ಟು ಕೊಡುಗೆಗಳನ್ನು ನೀಡಲಿಚ್ಚಿಸಿರುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಜಿಲ್ಲೆ ಹಾಗೂ ರಾಜ್ಯದ ಜನತೆ ಕೈಜೋಡಿಸಬೇಕು. ಚಿಕ್ಕಮಗಳೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಗೆ ಸಾರ್ವಜನಿಕರು ಆಶೀರ್ವಾದ ಮಾಡಿದ್ದಲ್ಲಿ ಹೆಚ್.ಡಿ.ಕೆ. ಅವರು ಮುಖ್ಯಮಂತ್ರಿಯಾಗಿ ಜನತೆಗೆ ಸ್ಪಂದಿಸುವ ಕಾರ್ಯದಲ್ಲಿ ಮುಂದಾ ಗಲಿದ್ದಾರೆ ಎಂದರು.
ಚಿಕ್ಕಮಗಳೂರು ಭಾಗದಲ್ಲಿ ಮಲೆನಾಡು ಹಾಗೂ ಗ್ರಾಮೀಣ ಪ್ರದೇಶವನ್ನು ಒಳಗೊಂಡಿದ್ದು ಅಭಿವೃದ್ದಿ ವಿಚಾರದಲ್ಲಿ ಸಾಕಷ್ಟು ಕೆಲಸಗಳಾಗಿರಬೇಕಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜೆಡಿಎಸ್ನ್ನು ಬೆಂಬಲಿಸಬೇಕು. ರಾಜ್ಯದ ಭ್ರಷ್ಟರಹಿತ ಆಡಳಿತ ನಡೆಸಲು ಮತದಾರರು ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಪಕ್ಷದ ಮುಖಂಡರುಗಳು ಹಾಜರಿದ್ದರು.