ಚಿಕ್ಕಮಗಳೂರು: ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ ಜೊತೆ ರಾಹುಲ್ ಗಾಂಧಿಯ ಒಪ್ಪಂದ ದೇಶಭಕ್ತಿಗೆ ವಿರೋಧದ ಒಪ್ಪಂದ ಎಂಬ ಅನುಮಾನ ಕಾಡುತ್ತಿದೆ. ಭಾರತ್ ತೆರೇ ತುಕುಡೆ ಹೂಂಗೆ ಇನ್ಷಾ ಅಲ್ಲಾ ಅಂತ ಘೋಷಣೆ ಕೂಗಿದ ತುಕುಡೆ ಗ್ಯಾಂಗಿಗೆ ಬೆಂಬಲ ಕೊಡುತ್ತಾರೆ. ಆದರೆ, ದೇಶಭಕ್ತಿಯ ಪ್ರೇರಣೆಯಿಂದ ಕೂಡಿದ ಪಾಠವನ್ನು ಹಿಂದೆ ತೆಗೆಯುತ್ತಾರೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸಿಗರಿಗೆ ದೇಶಭಕ್ತಿ ಅಂದರೆ ಅಲರ್ಜಿ ಅನ್ನುವುದು ಸ್ಪಷ್ಟವಾಗುತ್ತದೆ. ನಾವು ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿರುವ ಸರ್ಕಾರದ ವಿರುದ್ಧ ಅದೇ ಪಠ್ಯವನ್ನು ಜನರ ಮುಂದೆ ಇಟ್ಟು ಹೋರಾಟ ಮಾಡುತ್ತೇವೆ . ಅದರಲ್ಲಿ ಏನು ತಪ್ಪು ಇದೆ ಎಂದು ತಪ್ಪು ಹುಡುಕಲು ಜನರನ್ನ ಕೇಳುತ್ತೇವೆ ಎಂದಿದ್ದಾರೆ.
ಚಕ್ರವರ್ತಿ ಸೂಲಿಬೆಲೆ, ಭಗತ್ ಸಿಂಗ್-ಸುಖದೇವ್-ರಾಜಗುರು ಬಗ್ಗೆ ದೇಶಭಕ್ತಿ ಪ್ರೇರಿತ ಲೇಖನ ಬರೆದಿದ್ದರು. ಕಾಂಗ್ರೆಸಿಗೆ ಅಂಬೇಡ್ಕರ್ ಅವರನ್ನು ಕಂಡರೆ ಆಗುತ್ತಿರಲಿಲ್ಲ ಎಂದು ಭಾವಿಸಿದ್ದೆ. ಆದರೆ, ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಕಂಡರು ಆಗುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಕಾಂಗ್ರೆಸ್ಸಿಗೆ ಯಾವುದೇ ಕ್ರಾಂತಿಕಾರಿಗಳನ್ನು ಕಂಡರೂ ಆಗುವುದಿಲ್ಲ . ಕಾಂಗ್ರೆಸ್ ತೆಗೆದಿರುವುದು ಕ್ರಾಂತಿಕಾರಿಗಳ ಪಾಠ. ಚಕ್ರವರ್ತಿ ಸೂಲೆಬೆಲೆ ಅವರ ಜೀವನದ ಪಠ್ಯ ಅಲ್ಲ. ಕಾಂಗ್ರೆಸಿಗೆ ಅಂಬೇಡ್ಕರ್ ಅವರನ್ನ ಕಂಡರೂ ಆಗುತ್ತಿರಲಿಲ್ಲ. ಭಗತ್ ಸಿಂಗ್, ರಾಜ್ಗುರು, ಸುಖದೇವ್ ಅವರನ್ನೂ ಕಂಡರೂ ಆಗುತ್ತಿಲ್ಲ. ಅಂದರೆ, ಕಾಂಗ್ರೆಸ್ಸಿಗೆ ಕ್ರಾಂತಿಕಾರಿಗಳನ್ನ ಕಂಡರೆ ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಅಂಬೇಡ್ಕರ್ ಬದುಕಿದ್ದಾಗಲೂ ವಿರೋಧ ಮಾಡಿದರು. ಚುನಾವಣೆಯಲ್ಲಿ ಸೋಲಿಸಿ, ಸತ್ತಾಗಲು ಅವಮಾನಿಸಿದರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.