ಚಿಕ್ಕಮಗಳೂರು: ಪ್ರತಿನಿತ್ಯ ಕರ್ಕಶ ಶಬ್ದಮಾಲಿನ್ಯ, ಮನೆಯೊಳಗೆ ಮರದಪುಡಿ ದೂಳು ಹಾಗೂ ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ಎದುರಾಗುವ ಆತಂಕ ನಿರ್ಮಾಣವಾಗಿದ್ದು ಕೂಡಲೇ ಇವುಗಳಿಂದ ಮುಕ್ತಗೊಳಿಸಿ ಸುಗಮ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಕಾವೇರಿ ಸಾಮಿಲ್ ಹಿಂಭಾಗದ ಬಡಾವಣೆಯ ನಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಸಂಬಂಧ ಉಪವಿಭಾಗಾಧಿಕಾರಿ ಹೆಚ್.ಡಿ.ರಾಜೇಶ್ ಅವರಿಗೆ ಮನವಿ ಸಲ್ಲಿಸಿದ ಬಡಾ ವಣೆಯ ನಿವಾಸಿಗಳು ಪ್ರತಿನಿತ್ಯ ಕಾವೇರಿ ಸಾಮೀಲ್ನಿಂದ ಹೊರಹೊಮ್ಮುವ ಶಬ್ದಮಾಲಿನ್ಯ, ದೂಳಿನ ಪರಿಣಾಮ ದಿಂದಾಗಿ ನೆಮ್ಮದಿ ಜೀವನ ನಡೆಸಲಾಗದೇ ಹಾಗೂ ಆರೋಗ್ಯದ ಸಮಸ್ಯೆ ಎದುರಾಗುವ ಆತಂಕ ಕಾಡುತ್ತಿದೆ ಎಂದು ಹೇಳಿದರು.
ಈ ಹಿಂದೆ ಜನವಸತಿ ಇಲ್ಲದಿದ್ದಂತಹ ಸಂದರ್ಭದಲ್ಲಿ ನಗರದ ಕೆಂಪನಹಳ್ಳಿ ಸಮೀಪದ ಕಾವೇರಿ ಸಾಮಿಲ್ ಪ್ರಾರಂಭವಾಗಿತ್ತು. ನಂತರ ದಿನಗಳಲ್ಲಿ ಈ ಪ್ರದೇಶದಲ್ಲಿ ಜನವಸತಿ ಪ್ರದೇಶವಾಗಿ ಮಾರ್ಪಟ್ಟಿದೆ. ಆದರೆ ಕಾವೇರಿ ಸಾಮಿಲ್ ಅತಿಯಾದ ಶಬ್ದಮಾಲಿನ್ಯ, ಮನೆಯೊಳಗೆ ಮರದ ದೂಳಿಂದಾಗಿ ಬಡಾವಣೆಯ ನಿವಾಸಿಗಳಿಗೆ ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾಗಿದೆ ಎಂದು ತಿಳಿಸಿದರು.
ಸಾಮಿಲ್ನ ಶಬ್ದಮಾಲಿನ್ಯವು ಬೆಳಿಗ್ಗೆ ೫ ರಿಂದ ಕೆಲಸ ಪ್ರಾರಂಭಿಸುವುದರಿಂದ ದಿನವೀಡಿ ದುಡಿದು ಬರುವ ಜನತೆಗೆ ನೆಮ್ಮದಿಯಿಂದ ನಿದ್ರಿಸಲು ಅಸಾಧ್ಯವಾಗಿದೆ. ಜೊತೆಗೆ ಇದರಿಂದ ಹೊರಹೊಮ್ಮುವ ಪುಡಿ ಇಡೀ ಮನೆಗಳ ಲ್ಲೂ ಹರಡಿ ದೂಳುಮಯವಾಗಿದೆ. ವೃದ್ದರು, ಮಕ್ಕಳಿಗೆ ಇದರಿಂದ ಶ್ವಾಸಕೋಶ ಅಥವಾ ಉಬ್ಬಸ ಕಾಯಿಲೆ ಸಂಭವಿಸುವ ಆತಂಕ ಎದುರಾಗಿದೆ ಎಂದು ಹೇಳಿದರು.
ಈ ನಡುವೆ ಮಳೆಗಾದಲ್ಲಿ ಕಾವೇರಿ ಸಾಮಿಲ್ ಸುತ್ತಮುತ್ತಲಿರುವ ಮರದಪುಡಿ ಇತ್ಯಾದಿ ಕೊಳೆತು ಜಲಮೂಲಕ್ಕೆ ಸೇರಿ ಕಲುಷಿತವಾಗಿದೆ. ಜೊತೆಗೆ ಸುತ್ತಮುತ್ತ ಬೆಳೆದಿರುವ ಗಿಡಗಂಟಿಗಳಿಂದ ಅತಿಯಾಗಿ ಸೊಳ್ಳೆಗಳು ಉತ್ಪತಿಯಾಗುವ ಪರಿಣಾಮ ನಿವಾಸಿಗಳು ರೋಗರುಜಿನಗಳಿಗೆ ತುತ್ತಾಗುವ ಸಂಭವವಿರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೂಡಲೇ ಜಿಲ್ಲಾಡಳಿತವು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಕಾವೇರಿ ಸಾಮಿಲ್ ನ ಪರವಾನಗಿ ರದ್ದುಗೊಳಿಸಿ ನಗರ ಹೊರವಲಯದಲ್ಲಿ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಂಡು ಸ್ಥಳೀಯ ನಿವಾಸಿಗಳಿಗೆ ಸುಗಮ ಜೀವನ ನಡೆಸಲು ಸಹಕರಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳಾದ ರುದ್ರಮ್ಮ, ಕಲಾವತಿ, ಜಯಶ್ರೀ, ಆಶಾ, ಮಧು ಇದ್ದರು.